ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ವಿದ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ನಿನ್ನೆ ಬೆಂಗಳೂರಿನಲ್ಲಿ ಸಿ.ಸಿ.ಬಿ. ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದ ಸ್ಪೋಟಕ್ಕೆ ತಯಾರಿ ನಡೆಸಿದ್ದ ಸೈಯದ್ ಸುಹೇಲ್, ಜಾಹೀದ್ ತಬ್ರೇಸ್, ಸೈಯದ್ ಮುದಾಸೀರ್, ಮಹಮದ್ ಫೈಸಲ್, ಮಹಮದ್ ಉಮರ್ ಎಂಬ ಐವರು ಸಂಚುಕೋರರನ್ನು ಪೊಲೀಸರು ಬಂಧಿಸುವ ಮೂಲಕ ಸಂಭವನೀಯ ದೊಡ್ಡ ಅನಾಹುತವನ್ನು ತಡೆದಿದ್ದಾರೆ.
ಬಂಧಿತರೆಲ್ಲರು ಬೆಂಗಳೂರಿನ ನಿವಾಸಿಗಳೇ, ಎಲ್ಲರೂ ಚಾಲಕ ಮತ್ತು ಮೆಕಾನಿಕ್ ವೃತ್ತಿ ನಿರತರು.
2017ರಲ್ಲಿ ವಿವಿಧ ಅಪರಾಧ ಪ್ರಕರಣಗಳಿಗಾಗಿ ಜೈಲುಪಾಲಾಗಿದ್ದ ಇವರು ಜೈಲಿನಲ್ಲಿ ಸಂಪರ್ಕಕ್ಕೆ ಬಂದ ಲಷ್ಕರ್ ಎ ತೋಯ್ಬಾ ಮುಖಂಡನಿಂದ ಪ್ರೇರಿತರಾಗಿ ಉಗ್ರ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದರು ಎಂದು ತಿಳಿದುಬಂದಿದೆ.
ಬೆಂಗಳೂರಿನ ಪ್ರಮುಖ ಹೋಟೆಲ್ ಗಳು, ಬಸ್ ನಿಲ್ದಾಣಗಳು ಸೇರಿದಂತೆ ಪ್ರಮುಖ ಜನನಿಬಿಡದ ಪ್ರದೇಶಗಳಲ್ಲಿ ಸ್ಪೋಟಕ್ಕೆ ಸಂಚು ರೂಪಿಸಿದ್ದರು.
ಶಂಕಿತರಿಂದ 7 ನಾಡಾ ಬಂದೂಕು, 45 ಗುಂಡುಗಳು, ಸ್ಯಾಟಲೈಟ್ ಮಾದರಿಯ ವಾಕಿಟಾಕಿಗಳು, 12 ಮೊಬೈಲ್, ಡ್ರಾಗರ್ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಸುಲ್ತಾನ್ ಪಾಳ್ಯದ ಪ್ರಾರ್ಥನ ಮಂದಿರ ಮತ್ತು ಆರ್.ಟಿ,ನಗರದ ಕನಕ ಬಡಾವಣೆಯ ಸೈಯದ್ ಸುಹೇಲ್ ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ನಿರಂತರ ಸಭೆ ಸೇರಿ ಉಗ್ರ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ತಂಡದ ಮಾಸ್ಟರ್ ಮೈಂಡ್ ಜುನೈದ್ ಎಂಬಾತ ಸದ್ಯ ದುಬೈನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಆತನ ಬಂಧನಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಸಕಾಲಿಕ ಕ್ರಮದ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ವಿರೋಧ ಪಕ್ಷದ ಮುಖಂಡರು ಪೊಲೀಸರನ್ನು ಅಭಿನಂದಿಸಿದ್ದಾರೆ.