ಬಾಳೆ ಬೆಳೆಯನ್ನು ವೈಜ್ಞಾನಿಕವಾಗಿ ಕೃಷಿ ಪದ್ಧತಿ ಅಳವಡಿಸಿಕೊಂಡು ಲಾಭದಾಯಕವಾಗಿ ಬೆಳೆಯಲು ಸಾಧ್ಯ, ಬಾಳೆಯಲ್ಲಿ ಮೌಲ್ಯವರ್ಧನೆ ಅನುಸರಿಸುವುದರಿಂದ ಉದ್ಯಮವವಾಗಿ ಬೆಳೆಸಲು ಸಾಧ್ಯವಿದೆ ಎಂದು ಮೂಡಿಗೆರೆ ತೋಟಗಾರಿಕೆ ಮಹಾ ವಿದ್ಯಾಲಯದ ಡೀನ್ ಡಾ. ನಾರಾಯಣ ಎಸ್.ಮಾವರ್ಕರ್ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ತೋಟಗಾರಿಕೆ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಭಾರತೀಯ ಕೃಷಿ ಅನುಸಂದಾನ ಪರಿಷತ್ತು, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಮತ್ತು ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ 10 ದಿನ ನಡೆಯುವ ನಿಖರ ಬಾಳೆ ಬೇಸಾಯ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಬಾಳೆ ಬೆಳೆ ಎಲ್ಲಾ ಹವಾಮಾನದಲ್ಲಿಯೂ ಸುಲಭವಾಗಿ ಬೆಳೆಯುವ ಒಂದು ಬೆಳೆಯಾಗಿದೆ. ಬಾಳೆ ಕೃಷಿಯಲ್ಲಿ ವೈಜ್ಞಾನಿಕ ನಿಖರ ಪದ್ದತಿಯನ್ನು ಅಳವಡಿಸಿದಲ್ಲಿ ಖರ್ಚು ವೆಚ್ಚ ಕಡಿಮೆ ಮಾಡಿ, ಅಧಿಕ ಇಳುವರಿ ಪಡೆಯಲು ಸಾಧ್ಯವಿದೆ ಎಂದು ಎಂದು ಹೇಳಿದರು.
ಭಾರತ ಸರಕಾರವು ಪರಿಶಿಷ್ಟ ಪಂಗಡದ ಆದಾಯ ದ್ವಿಗುಣಗೊಳಿಸಲು ಅನುವು ಮಾಡಿಕೊಡಲು 4 ಎಕರೆ ಪ್ರದೇಶದಲ್ಲಿ 4 ಮಂದಿ ಪರಿಶಿಷ್ಟ ಪಂಗಡದ ಪಲಾನುಭವಿಗಳು ಮಾದರಿ ಬಾಳೆ ಬೆಳೆಯನ್ನು ಬೆಳೆಯಲು ತಗುಲುವ ವೆಚ್ಚವನ್ನು ಭರಿಸಲಿದೆ ಎಂದು ಹೇಳಿದರು.
ಶಿಬಿರದಲ್ಲಿ ದೊಡ್ಡಹಳ್ಳ, ಹೊಯ್ಸಳಲು, ಭಾರತೀಬೈಲು ಸೇರಿದಂತೆ ತಾಲೂಕಿನ ವಿವಿಧೆಡೆ ಗ್ರಾಮಗಳಿಂದ ಬಾಳೆ ಬೆಳೆಯಲು ಪರಿಶಿಷ್ಟ ಪಂಗಡದ ಆಸಕ್ತ ರೈತರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ.ಎಸ್.ಕೆ.ನಟರಾಜ್, ಡಾ.ಎಂ.ಶಿವಪ್ರಸಾದ್, ಡಾ.ವಿ.ಶ್ರೀನಿವಾಸ್, ಡಾ. ಬಿ.ಎಸ್.ಶಿವಕುಮಾರ್, ಡಾ.ಎ.ಟಿ.ಕೃಷ್ಣಮೂರ್ತಿ ಮತ್ತಿತರರಿದ್ದರು.