ಕಾಡಾನೆ ದಾಳಿಯಿಂದ ಮನೆಯ ಸಮೀಪ ಕಟ್ಟಿದ್ದ ಹಸುವೊಂದು ಅಸುನೀಗಿರುವ ಘಟನೆ ಮೂಡಿಗೆರೆ ತಾಲೂಕಿನ ಮಾವಿನಕುಡಿಗೆ ಗ್ರಾಮದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಬಾಳೂರು ಹೋಬಳಿ ಕೂವೆ ಸಮೀಪದ ಮಾವಿನಕೂಡಿಗೆ ಗ್ರಾಮದ ಬೋಬೇಗೌಡ ಎಂಬುವವರ ಮನೆ ಸಮೀಪವೇ ಕಾಡಾನೆ ದಾಂದಲೆ ನಡೆಸಿದ್ದು, ಅಡಿಕೆ, ತೆಂಗಿನ ಮರ, ಬಾಳೆ ಸೇರಿದಂತೆ ತೋಟದ ಬೆಳೆಗಳನ್ನು ನಾಶಪಡಿಸಿದೆ. ಜೊತೆಗೆ ಮನೆಗೆ ಹೊಂದಿಕೊಂಡಂತೆ ಕಟ್ಟಿಹಾಕಿದ್ದ ಹಸುವಿನ ಮೇಲೆ ಕಾಡಾನೆ ದಾಳಿ ಮಾಡಿದ್ದು, ತಪ್ಪಿಸಿಕೊಳ್ಳಲು ಆಗದೇ ಹಸು ಸ್ಥಳದಲ್ಲೇ ಪ್ರಾಣಬಿಟ್ಟಿದೆ.
ತೋಟದಲ್ಲಿ ಅಡಿಕೆ ಮತ್ತು ನಾಲ್ಕು ಪಸಲು ಬಿಡುತ್ತಿದ್ದ ದೊಡ್ಡ ತೆಂಗಿನ ಮರಗಳನ್ನು ಕಾಡಾನೆ ಬುಡಸಮೇತ ಕಿತ್ತುಹಾಕಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ಪಶುವೈದ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಅನೇಕ ಕಡೆ ಕಾಡಾನೆ ಹಾವಳಿ ಮಿತಿಮೀರಿದೆ. ಕಾಡಾನೆಗಳ ಉಪಟಳದಿಂದ ಬೆಳೆಗಳ ನಷ್ಟದ ಜೊತೆಗೆ ಜನರು ಜೀವಭಯದಲ್ಲಿ ಬದುಕು ನಡೆಸುವಂತಾಗಿದೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಲೇ ಬರುತ್ತಿದ್ದು, ಯಾವುದೇ ಪ್ರಯೋಜನ ಆಗುತ್ತಿಲ್ಲ.