ಇಂದು ಅದೆಷ್ಟೋ ಯುವಕರು ಒಂದು ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಪರಿತಪಿಸುತ್ತಿದ್ದಾರೆ ಆದರೆ ಇಲ್ಲೊಬ್ಬ ಭೂಪ ಬರೋಬ್ಬರಿ 15 ಮದುವೆಯಾಗಿದ್ದಾನೆ.
ಬೆಂಗಳೂರಿನ ಬನಶಂಕರಿ ಬಡಾವಣೆಯ ನಿವಾಸಿ ಮಹೇಶ್ ನಾಯಕ್ ಕಳೆದ 9 ವರ್ಷದ ಅವಧಿಯಲ್ಲಿ ಹದಿನೈದು ಮದುವೆಯಾಗಿರುವಾತ. ವಿಧವೆಯರು, ವಿಚ್ಛೇದಿತರು ಮತ್ತು ಉನ್ನತ ಹುದ್ದೆಯಲ್ಲಿ ಇದ್ದವರನ್ನೇ ಗುರುತಿಸಿ ಈತ ಅವರನ್ನು ನಂಬಿಸಿ ಮದುವೆಯಾಗುತ್ತಿದ್ದ. ಮದುವೆಯಾದ ಕೆಲವೇ ದಿನಗಳಲ್ಲಿ ಲಕ್ಷಾಂತರ ರು ಹಣ ಹಾಗೂ ಚಿನ್ನಾಭರಣದೊಂದಿಗೆ ಪರಾರಿ ಆಗುತ್ತಿದ್ದ.
ಮನೆಯಲ್ಲಿ ತಂದೆಯೊಂದಿಗೆ ಜಗಳ ಮಾಡಿಕೊಂಡು ಬಂದಿದ್ದ ಈತ ಮದುವೆಯಾಗುವುದನ್ನೇ ಉದ್ಯೋಗ ಮಾಡಿಕೊಂಡಿದ್ದ. ವಿವಾಹ ಸಂಬಂಧಿ ವೆಬ್ ಸೈಟ್ ಗಳ ಮೂಲಕ ಮಹಿಳೆಯನ್ನು ಪರಿಚಯಿಸಿಕೊಂಡು ಅವರನ್ನು ನಂಬಿಸಿ ಮದುವೆಯಾಗುತ್ತಿದ್ದ.
ತಾನು ಡಾಕ್ಟರ್, ಇಂಜಿನಿಯರ್, ಸಿವಿಲ್ ಕಂಟ್ರಾಕ್ಟರ್ ಎಂದೆಲ್ಲ ಹೇಳಿಕೊಂಡು ಮಹಿಳೆಯರನ್ನು ನಂಬಿಸುತ್ತಿದ್ದ ಮಹೇಶ್ ನಾಯಕ್ ಬೆಂಗಳೂರು, ತುಮಕೂರು, ಪುಣೆ, ಹೈದರಾಬಾದ್ ಸೇರಿದಂತೆ ಹಲವೆಡೆ ಮಹಿಳೆಯರನ್ನು ಮದುವೆಯಾಗಿದ್ದಾನೆ.
ಸುಂದರವಾದ ಮತ್ತು ಡಾಕ್ಟರ್ ವೇಷದಲ್ಲಿ ಇರುವ ಪ್ರೊಫೈಲ್ ಪೋಟೋಗಳನ್ನು ಹಾಕಿಕೊಂಡು ಮಹಿಳೆಯರನ್ನ ಆಕರ್ಷಣೆ ಮಾಡುತ್ತಿದ್ದ
ಈಗ ಮೈಸೂರಿನ ಕುವೆಂಪು ನಗರದ ಪೊಲೀಸರು ಬೀಸಿದ ಬಲೆಗೆ ಈತ ಬಿದ್ದಿದ್ದಾನೆ. ಕೇವಲ ಐದನೇ ತರಗತಿ ವ್ಯಾಸಂಗ ಮಾಡಿರುವ ನಾಯಕ್ ತಾನು ಡಾಕ್ಟರ್ ಎಂದು ಬಹುತೇಕರನ್ನು ನಂಬಿಸಿ ಮದುವೆಯಾಗಿದ್ದ, ಇದಕ್ಕಾಗಿ ತುಮಕೂರಿನಲ್ಲಿ ಕ್ಲಿನಿಕ್ ಸಹ ತೆರೆದಿದ್ದ, ಅದರಲ್ಲಿ ಒಬ್ಬರು ನರ್ಸ್ ಅನ್ನು ಸಹ ನೇಮಿಸಿದ್ದ. ಕೆಲವು ಮಹಿಳೆಯರನ್ನು ತನ್ನ ಕ್ಲಿನಿಕ್ ಗೆ ಕರೆತಂದು ಡಾಕ್ಟರ್ ಎಂದು ನಂಬಿಸಿದ್ದ.
ಮೈಸೂರಿನ ನಿವಾಸಿ ಮಹಿಳೆಯೊಬ್ಬರಿಗೆ ತಾನು ಡಾಕ್ಟರೆಂದು ಹೇಳಿಕೊಂಡು ವಿವಾಹ ಮಾಹಿತಿಯ ವೆಬ್ ಸೈಟ್ ಒಂದರಲ್ಲಿ ಪರಿಚಯಿಸಿಕೊಂಡು ವಿವಾಹವಾಗಿದ್ದ. ಮೈಸೂರಿನ ವಿಜಯನಗರದಲ್ಲಿರುವ ಮನೆ ತೋರಿಸಿ ತನ್ನದೆಂದು ನಂಬಿಸಿದ್ದ. ಈತನ ಮಾತು ನಂಬಿದ ಮಹಿಳೆ ಜನವರಿ ಒಂದರಂದು ಆಂಧ್ರಪ್ರದೇಶದ ವಿಶಾಖಪಟ್ಟಣಂ ನಲ್ಲಿ ಮದುವೆಯಾಗಿದ್ದರು. ನಂತರ ಮೈಸೂರಿನ ಮನೆಗೆ ಬಂದು ನೆಲೆಸಿದ್ದರು. ಕೆಲ ದಿನಗಳ ನಂತರ ತಾನು ಮೈಸೂರಿನಲ್ಲಿ ಕ್ಲಿನಿಕ್ ಓಪನ್ ಮಾಡಬೇಕು ಎಂದು ಹೇಳಿ 70 ಲಕ್ಷ ರೂಗೆ ಡಿಮ್ಯಾಂಡ್ ಮಾಡಿದ್ದ. ಹಣ ಕೊಡಲು ಮಹಿಳೆ ಒಪ್ಪದೆ ಇದ್ದಾಗ ಕೊಲೆ ಬೆದರಿಕೆ ಹಾಕಿದ್ದ ಅಲ್ಲದೆ ಆಕೆ ಮನೆಯಲ್ಲಿ ಇಲ್ಲದಿರುವ ಸಮಯ ನೋಡಿಕೊಂಡು 15 ಲಕ್ಷ ರೂ ಹಣ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ .
ಈ ಸಂಬಂಧ ಮಹಿಳೆ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಿರಂತರ ಒಂದೊಂದು ಊರಿಗೆ ಸುತ್ತುತ್ತಿದ್ದ ಈತನನ್ನು ಬಂಧಿಸಲು ಪೊಲೀಸರು ನಿರಂತರ ಕಾರ್ಯಾಚರಣೆ ಮಾಡಿದ್ದರು. ಮೊನ್ನೆ ಮಹೇಶ್ ನಾಯಕ್ ಮೈಸೂರಿಗೆ ಬಂದಿದ್ದಾಗ ಆತನನ್ನು ಬಂಧಿಸಿದ್ದಾರೆ.
ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಮೂಲಕ ಪರಿಚಯವಾದವರ ಜೊತೆಗೆ ವಿವಾಹಸಂಬಂಧ ಬೆಳೆಸುವ ಮುನ್ನ ಎಚ್ಚರಿಕೆಯಿಂದ ಇರಬೇಕು. ವ್ಯಕ್ತಿಯ ಪೂರ್ವಾಪರವನ್ನು ಸರಿಯಾಗಿ ಅಧ್ಯಯನ ಮಾಡದೇ ಅಲ್ಲಿನ ನೀಡಿರುವ ಆಕರ್ಷಕ ವಿವರಗಳಿಗೆ ಮರುಳಾದರೆ ಇಂತಹ ಮೋಸಗಾರರ ಬಲೆಗೆ ಬೀಳುವ ಸಾಧ್ಯತೆಯೇ ಹೆಚ್ಚು.