ಬೃಹತ್ ಗಾತ್ರದ ಹೆಬ್ಬಾವು ಒಂದು ಮನೆಯಂಗಳಕ್ಕೆ ಬಂದು ಸಾಕುನಾಯಿಯನ್ನು ನುಂಗಿದ ಘಟನೆ ಎನ್.ಆರ್. ಪುರ ತಾಲ್ಲೂಕಿನಲ್ಲಿ ನಡೆದಿದೆ. ತಾಲೂಕಿನ ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿಯ ಸಾರ್ಯ ಗ್ರಾಮದ ಮಾವಿನ ಕುಡಿಗೆಯ ಶ್ರೀಮತಿ ಎಂಬುವರ ಮನೆಯ ಸಮೀಪ ಶನಿವಾರ ಮಧ್ಯಾಹ್ನ ನಡೆದಿದೆ.
ಮನೆಯ ಸಮೀಪಕ್ಕೆ ಬಂದಿದ್ದ 13 ಅಡಿ ಉದ್ದದ ಭಾರೀ ಗಾತ್ರದ ಹೆಬ್ಬಾವನ್ನು ಕಂಡು ನಾಯಿ ಬೊಗಳಿದೆ. ಹೆಬ್ಬಾವಿನ ಸಮೀಪಕ್ಕೆ ಹೋಗಿದ್ದ ನಾಯಿಯನ್ನು ಹೆಬ್ಬಾವು ಹಿಡಿದು ನುಂಗಿದೆ. ಶನಿವಾರ ಮಧ್ಯಾಹ್ನ 11.30ರ ಸುಮಾರಿಗೆ ನಾಯಿ ಬೊಗಳುವ ಶಬ್ದ ಮನೆಯವರಿಗೆ ಕೇಳಿದೆ. ನಂತರ ನಾಯಿ ಬೊಗಳುವುದನ್ನು ನಿಲ್ಲಿಸಿದೆ. ಮನೆಯವರು ಹೊರಗಡೆ ಬಂದಾಗ ಮನೆಯಿಂದ 50 ಅಡಿ ದೂರದ ಕಾಲುವೆಯಲ್ಲಿ ಹೆಬ್ಬಾವು ಮಲಗಿತ್ತು. ಹೆಬ್ಬಾವಿನ ಬಾಯಿಯಲ್ಲಿ ನಾಯಿ ಬಾಲ ಮಾತ್ರ ಕಾಣುತ್ತಿತ್ತು. ನಾಯಿಯ ಇಡೀ ದೇಹವನ್ನು ಹೆಬ್ಬಾವು ನುಂಗಿತ್ತು.
ತಕ್ಷಣ ಮನೆಯವರು ಅರಣ್ಯ ಇಲಾಖೆ ಸಿಬ್ಬಂದಿ ರಾಘವೇಂದ್ರ ಅವರಿಗೆ ತಿಳಿಸಿದ್ದಾರೆ. ಅರಣ್ಯ ಇಲಾಖೆಯವರು ಕುದುರೆಗುಂಡಿಯ ಉರಗ ತಜ್ಞ ಪಿ.ಜಿ.ಹರೀಂದ್ರ ಅವರೊಂದಿಗೆ ಸ್ಥಳಕ್ಕೆ ಆಗಮಿಸಿದ್ದು, ಹರೀಂದ್ರ ಅವರು ಹೆಬ್ಬಾವಿಗೆ ಪೆಟ್ಟಾಗದಂತೆ ಹಿಡಿದು ಅಭಯಾರಣ್ಯಕ್ಕೆ ಬಿಟ್ಟು ಬಂದಿದ್ದಾರೆ. ಹೆಬ್ಬಾವು ಅಂದಾಜು 60 ರಿಂದ 70 ಕೆಜಿಯಷ್ಟುತೂಕವಿರ ಬಹುದು ಎಂದು ಅಂದಾಜು ಮಾಡಲಾಗಿದೆ.