ಕಾರಿಗೆ 3 ಸಾವಿರ ರೂಗಳ ಪೆಟ್ರೋಲ್ ಹಾಕಿಸಿ ಹಣವನ್ನು ನೀಡದೇ ಖದೀಮರ ತಂಡವೊಂದು ಪರಾರಿಯಾಗಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ, ಶೃಂಗೇರಿ ಪಟ್ಟಣದ ಹೊರವಲಯದ ಹೆಚ್.ಪಿ. ಪೆಟ್ರೋಲ್ ಬಂಕ್ ನಲ್ಲಿ ಘಟನೆ ನಡೆದಿದೆ.
ಶುಕ್ರವಾರ ರಾತ್ರಿ ಸುಮಾರು 10 ಗಂಟೆಯ ಸಮಯದಲ್ಲಿ ಪೆಟ್ರೋಲ್ ಬಂಕ್ ಗೆ ಬಂದ ಗ್ಯಾಂಗ್ ತಮ್ಮ ಕಾರಿಗೆ ಮೂರು ಸಾವಿರ ರೂಗಳ ಪೆಟ್ರೋಲ್ ಹಾಕಿಸಿದೆ. ಪೆಟ್ರೋಲ್ ಹಾಕಿದ ಸಿಬ್ಬಂದಿ ಹಣ ಕೇಳಲು ಬರುವ ಹೊತ್ತಿಗೆ ಕಾರನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ. ವಂಚಕರ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಂಬರ್ ಪ್ಲೇಟ್ ಇಲ್ಲದ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಗ್ಯಾಂಗ್ ಪೆಟ್ರೋಲ್ ಬಂಕ್ ನಿಂದ ಪರಾರಿಯಾಗಿ ಬಳಿಕ ತನಿಕೋಡು ಚೆಕ್ ಪೋಸ್ಟ್ ನಲ್ಲೂ ಪಾಸ್ ತೆಗೆದುಗೊಳ್ಳದೆ ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ.
ಇದು ಗೋಕಳ್ಳರ ಗ್ಯಾಂಗ್ ಎಂದು ತಿಳಿದುಬಂದಿದ್ದು, ಶೃಂಗೇರಿಯ ಬಿದರಗೋಡು ಸಮೀಪ ಅದೇ ಸ್ವಿಫ್ಟ್ ಕಾರಿನಲ್ಲಿ ಇದೇ ಗ್ಯಾಂಗ್ ಗೋಕಳ್ಳತನ ಮಾಡಿದೆ ಎಂದು ಆರೋಪಿಸಲಾಗುತ್ತಿದೆ.
ಶೃಂಗೇರಿ ಸುತ್ತಮುತ್ತ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಗೋಕಳ್ಳತನ ಕೃತ್ಯ ನಡೆಯುತ್ತಿವೆ. ಪೊಲೀಸ್ ಇಲಾಖೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಮತ್ತು ಹಿಂದೂಪರ ಸಂಘಟನೆಗಳು ಆಗ್ರಹಿಸಿದ್ದಾರೆ.