ಜನರ ನಡುವೆ ನಾನಾ ರೀತಿಯ ಭಿನ್ನಾಭಿಪ್ರಾಯವಿದ್ದರೂ ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಸಾಮರಸ್ಯ ಭಾವನೆ ಉಂಟಾಗಲು ಸಾಧ್ಯವಿದೆ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.
ಅವರು ಸೋಮವಾರ ಸಂಜೆ ಜನ್ನಾಪುರ ವರ್ತಕರ ಭವನದಲ್ಲಿ ಗೋಣಿಬೀಡು ರೋಟರಿ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಪದವಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಪ್ರಸ್ತುತ ಕಾಲಘಟ್ಟದಲ್ಲಿ ಸೇವೆಗೆ ಹೆಚ್ಚು ಒತ್ತು ಕೊಟ್ಟಿರುವ ರೋಟರಿ ಸಂಸ್ಥೆಯ ಕಾರ್ಯ ಶ್ಲಾಘನೀಯ. ಈ ಬಾರಿ ರೋಟರಿ ಸಂಸ್ಥೆ ಹಾಕಿಕೊಂಡಿರುವ ವಾರ್ಷಿಕ ಯೋಜನೆಯಲ್ಲಿ ಮಾನವ ಸೇವೆ ಮಾಧವನ ಸೇವೆ ಎಂಬಂತೆ ಶಿಕ್ಷಣ, ಕೃಷಿ, ಆರೋಗ್ಯ ಸೇರಿದಂತೆ ಅನೇಕ ಬಗೆಯ ಸೇವಾ ಚಟುವಟಿಕೆಗೆ ಮುಂದಾಗಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ. ಸಂಘಸಂಸ್ಥೆಗಳು ಸಂತ್ರಸ್ತರ ಸೇವೆಗೆ ಹೆಚ್ಚು ಗಮನ ಹರಿಸಬೇಕೆಂದು ಸಲಹೆ ನೀಡಿದರು.
ನೂತನ ಅಧ್ಯಕ್ಷ ಸಂದೀಪ್ ಪದವಿ ಸ್ವೀಕರಿಸಿ ಮಾತನಾಡಿ, ರೋಟರಿ ಸಂಸ್ಥೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಲು ತನಗೆ ಈ ಬಾರಿ ಅವಕಾಶ ದೊರಕಿದೆ. ಎಲ್ಲಾ ಪೂರ್ವಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ಸಲಹೆ ಸಹಕಾರದೊಂದಿಗೆ ಶಿಕ್ಷಣ, ರೈತರ ಹಾಗೂ ಸಂತ್ರಸ್ತರ ಏಳಿಗೆಗೆ ಶ್ರಮಿಸುತ್ತೇನೆ. ಆರೋಗ್ಯ ದೃಷ್ಟಿಯಿಂದ ಯೋಗ, ಧ್ಯಾನ ಹಾಗೂ ಸುರಕ್ಷಿತ ಚಾಲನೆಗೆ ಹೆಚ್ಚು ಆಧ್ಯತೆ ನೀಡಲಾಗುವುದು. ಇಂತಹ ಹತ್ತು ಹಲವಾರು ಜನಪರ ಕಾರ್ಯ ಮಾಡುವ ಮೂಲಕ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ರೋಟರಿ ಅಸಿಸ್ಟೆಂಟ್ ಗೌವರ್ನರ್ ವಿನೋಧ್ ಕುಮಾರ್ ಶೆಟ್ಟಿ ನೂತನ ಪದಾಧಿಕಾರಿಗಳಿಗೆ ಪದವಿ ಪ್ರಧಾನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ನಂಜೇಗೌಡ ವಹಿಸಿದ್ದರು.
ಕಾರ್ಯದರ್ಶಿ ಮಹಿಪಾಲ್, ನೂತನ ಕಾರ್ಯದರ್ಶಿ ಎನ್.ಕೆ. ನಯನ್ ಮತ್ತಿತರರಿದ್ದರು.