ಮೂಡಿಗೆರೆ ರೈತಭವನದಲ್ಲಿ ಕೆಂಪೇಗೌಡ ಒಕ್ಕಲಿಗರ ವೇದಿಕೆ ಸೇರಿದಂತೆ ವಿವಿಧ ಒಕ್ಕಲಿಗ ಸಂಘಟನೆಗಳಿಂದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿಸಲಾಯಿತು. ಕೆಂಪೇಗೌಡ ಒಕ್ಕಲಿಗ ವೇದಿಕೆ, ಒಕ್ಕಲಿಗರ ಹಿತರಕ್ಷಣಾ ವೇದಿಕೆ ಮತ್ತು ಕಾಫಿನಾಡು ಮಹಿಳಾ ಒಕ್ಕಲಿಗರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ಉಪಸಭಾಪತಿಗಳಾದ ಎಂ.ಕೆ. ಪ್ರಾಣೇಶ್ ಅವರು ; ಹಿಂದಿನಿಂದಲೂ ಒಕ್ಕಲಿಗರು ಸರ್ವರೂ ಒಂದೇ ಎಂಬ ಭಾವನೆ ಮೂಡಿಸಿಕೊಂಡು ಸಮಾಜಮುಖಿಯಾದ ಕೆಲಸ ಮಾಡಿಕೊಂಡು ಬಂದಿದ್ದಾರೆ. ಒಕ್ಕಲಿಗರ ಸಮುದಾಯ ಸಮಾಜಕ್ಕೆ ಕೊಟ್ಟ ಕೊಡುಗೆಯನ್ನು ಗುರುತು ಮಾಡುವ ಕಾರ್ಯ ನಾವೆಲ್ಲರೂ ಮಾಡಬೇಕಿದೆ. ನಾಡಪ್ರಭು ಕೆಂಪೇಗೌಡ ಅವರು ಸಮಾಜಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ಗುರುತಿಸುವಲ್ಲಿ ವಿಫಲರಾಗಿರುವುದು ವಿಷಾಧನೀಯ. ಸರ್ವರ ಪ್ರಗತಿಗಾಗಿ ಬೆಂಗಳೂರು ನಗರವನ್ನು ಕಟ್ಟುವ ಮೂಲಕ ಪ್ರಪಂಚದಲ್ಲಿಯೇ ಅತ್ಯುತ್ತಮ ನಗರವೆಂದು ಗುರುತು ಮಾಡಲು ಕಾರಣಕರ್ತರಾದ ಕೆಂಪೇಗೌಡರ ಕೊಡುಗೆಯನ್ನು ಪ್ರತಿಯೊಬ್ಬರೂ ನೆನೆಪು ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಬೆಂಗಳೂರಿನ ವಿಜಯ ಕಾಲೇಜು ಉಪ ಪ್ರಾಂಶುಪಾಲ ಡಾ.ಶಾಂತರಾಜ್ ಮಾತನಾಡಿ, ಜಗತ್ತಿನಲ್ಲಿ ಲಕ್ಷಾಂತರ ಮಂದಿ ಹುಟ್ಟಿ, ಎಲ್ಲೆಲ್ಲೋ ಮರೆಯಾಗಿ ಹೋಗುತ್ತಾರೆ. ಆದರೆ ಓರ್ವನ ಗುರುತು ಆಗಬೇಕೆಂದರೆ ಆತನ ವ್ಯಕ್ತಿತ್ವ ಹಾಗೂ ಭಿನ್ನತೆಯಿಂದ ಮಾತ್ರ ಸಾಧ್ಯವಿದೆ. ಹಾಗೆಯೇ ಕೆಂಪೇಗೌಡರ ವ್ಯಕ್ತಿತ್ವ, ಅವರು ಸಾಗಿದ ದಾರಿ, ಸಮಾಜದ ಅಭಿವೃದ್ಧಿಗೆ ಮಾಡಿದ ಮಾರ್ಪಾಡುಗಳಿಂದ ಕೆಂಪೇಗೌಡರನ್ನು ನಾವಿಂದು ಸ್ಮರಿಸುವಂತಾಗಿದೆ. ತಮ್ಮ ಕುಲ ಬಾಂಧವರು, ಸರ್ವರ ಹಿತ ಕಾಪಾಡಲು ಹಾಗೂ ನಾಡಿನ ಭಾವ ಬಿತ್ತುವ ಪರಿಕಲ್ಪನೆ ಹೊಂದಿದ್ದ ಕೆಂಪೇಗೌಡರ ಶ್ರಮದಿಂದ ಇಂದು ಬೆಂಗಳೂರು ಮಹಾನಗರ ಪ್ರಜ್ವಲಿಸಲು ಕಾರಣವಾಗಿದೆ. ಹಾಗಾಗಿ ಮಾನವ ತನ್ನ ಸ್ವಾರ್ಥದಿಂದ ಹೊರ ಬಂದು ನಿಸ್ವಾರ್ಥಿಗಳಾದರೆ ಮಾತ್ರ ಜಗದ, ಜನಾಂಗದ ಆರಾಧಕರಾಗಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 15 ಒಕ್ಕಲಿಗ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು;
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಂಪೇಗೌಡ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬ್ರಿಜೇಶ್ ಕಡಿದಾಳು ವಹಿಸಿದ್ದರು. ಒಕ್ಕಲಿಗರ ಸಂಘದ ಮಾಜಿ ಜಿಲ್ಲಾಧ್ಯಕ್ಷರಾದ ಹಳಸೆ ಶಿವಣ್ಣ, ಬಿ.ಎಲ್.ಸಂದೀಪ್, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಐ.ಎಂ.ಪೂರ್ಣೇಶ್, ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಎಚ್.ಎಂ.ಸತೀಶ್, ಪ.ಪಂ. ಸದಸ್ಯೆ ಆಶಾ ಮೋಹನ್, ಕಾಫಿನಾಡು ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಕಲಾವತಿ ರಾಜಣ್ಣ, ಒಕ್ಕಲಿಗರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್ಗೌಡ, ಹಿರಿಯ ಸಹಕಾರಿ ಓ.ಎಸ್.ಗೋಪಾಲಗೌಡ ಮತ್ತಿತರರಿದ್ದರು.
ಕಾರ್ಯಕ್ರಮದಲ್ಲಿ ಕಾಫಿನಾಡು ಮಹಿಳಾ ಒಕ್ಕಲಿಗರ ಸಂಘದ ಸದ್ಯರು ಪ್ರಾರ್ಥನೆ ಮತ್ತು ನಾಡಗೀತೆ ಹಾಡಿದರು. ಸುಂದ್ರೇಸ್ ಕೊಣಗೆರೆ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಪ್ರಸನ್ನ ಗೌಡಳ್ಳಿ ಸ್ವಾಗತಿಸಿದರು, ಆದರ್ಶ ತರುವೆ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು, ಕೆಂಪೇಗೌಡ ಒಕ್ಕಲಿಗರ ವೇದಿಕೆ ಪ್ರಧಾನ ಕಾರ್ಯದರ್ಶಿ ಬಿ.ಪಿ. ಪ್ರಸಾದ್ ಬಕ್ಕಿ ಕಾರ್ಯಕ್ರಮ ನಿರೂಪಿಸಿದರು. ಚಂದನ್ ಗ್ರೂಪ್ ಮಾಲೀಕರಾದ ಕೆ. ಮಂಚೇಗೌಡ ಕುಟುಂಬದವರು ಕಾರ್ಯಕ್ರಮದಲ್ಲಿ ಅನ್ನದಾನ ನೆರವೇರಿಸಿದರು.