ಹಾಸನ-ಬೇಲೂರು ಹೆದ್ದಾರಿಯ ಹಗರೆ ಸಮೀಪ ಫಾರ್ಚೂನರ್ ಮತ್ತು ಇಂಡಿಕಾ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಚಿಕ್ಕಮಗಳೂರು ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಪುತ್ರ ವಿಶಾಲ್ ಸುಜಯ್ ಕುಮಾರ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ಸುಜಯ್ ಹಾಸನದಲ್ಲಿ ಪುಟ್ಬಾಲ್ ಪಂದ್ಯಾವಳಿಗೆಂದು ಚಿಕ್ಕಮಗಳೂರಿನ ತನ್ನ ಸಹ ಆಟಗಾರರೊಂದಿಗೆ ಫಾರ್ಚೂನರ್ ಕಾರಿನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಹಾಸನ ಕಡೆಯಿಂದ ಬರುತ್ತಿದ್ದ ಇಂಡಿಕಾ ಕಾರು ಮತ್ತು ಫಾರ್ಚೂನರ್ ಕಾರುಗಳು ಹಗರೆ ಸಮೀಪ ಮುಖಾಮುಖಿ ಡಿಕ್ಕಿಯಾಗಿವೆ ಎಂದು ತಿಳಿದುಬಂದಿದೆ.
ಅಪಘಾತದ ರಭಸಕ್ಕೆ ಕಾರುಗಳು ಸಂಪೂರ್ಣ ಜಖಂಗೊಂಡಿದ್ದು, ಫಾರ್ಚೂನರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸುಜಯ್ ಕುಮಾರ್ ಮತ್ತವರ ಸ್ನೇಹಿತರು ಗಾಯಗೊಂಡಿದ್ದಾರೆ.
ಇಂಡಿಕಾ ಕಾರು ಹಾಸನ ಮೂಲದ ಪೊಲೀಸ್ ಸಿಬ್ಬಂದಿಯೊಬ್ಬರ ಪುತ್ರನಿಗೆ ಸೇರಿದ್ದು ಎನ್ನಲಾಗಿದೆ. ಇಂಡಿಕಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬರು ಕಾಲು ಮುರಿದಿದ್ದು ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗಾಯಗೊಂಡರವರನ್ನು ಹಾಸನದ ಆಸ್ಪತ್ರೆಗೆ ಸೇರಿಸಲಾಗಿದೆ. ಹಗರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕು.
ಎರಡು ಕಾರುಗಳ ಸ್ಥಿತಿಯನ್ನು ಕಂಡರೆ ಅದರಲ್ಲಿದ್ದವರು ಬದುಕಿಳಿದದ್ದೇ ಪವಾಡ ಎನ್ನುವಂತಾಗಿದೆ. ಎರಡು ಕಾರುಗಳಲ್ಲಿ ಏರ್ ಬ್ಯಾಗ್ ಓಪನ್ ಆಗಿರುವುದರಿಂದ ಒಳಗಿದ್ದವರು ಪ್ರಾಣಹಾನಿಯಿಂದ ಬಚಾವ್ ಆಗಿದ್ದಾರೆ ಎನ್ನಲಾಗಿದೆ.