ಗುಣಮಟ್ಟದ ಆಹಾರ ಸೇವನೆ ಜತೆಗೆ ಯೋಗಾಭ್ಯಾಸ ಕೂಡ ಮಾಡಿಕೊಂಡರೆ ಉತ್ತಮ ಆರೋಗ್ಯ ವೃದ್ಧಿಸಿಕೊಳ್ಳಲು ಸಾಧ್ಯವಿದೆ ಎಂದು ವೈದ್ಯಾಧಿಕಾರಿ ಡಾ.ಗೌತಮ್ ಹೇಳಿದರು.
ಅವರು ಬುಧವಾರ ಮೂಡಿಗೆರೆ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಜಿಲ್ಲಾ ಆಯುಷ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಯೋಗ ಮಾಡುವುದರಿಂದ ನಾನಾ ರೀತಿಯ ಕಾಯಿಲೆಗಳಿಂದ ಮುಕ್ತಿ ಕಾಣಬಹುದು. ಯೋಗದಲ್ಲಿ ಬರುವ ಪ್ರತಿಯೊಂದು ಆಸನವು ಮಾನವನ ವಿವಿಧ ಅಂಗಾಂಗಳಿಗೆ ಶಕ್ತಿ ನೀಡುತ್ತದೆ. ಹಾಗಾಗಿ ಪ್ರತಿಯೊಬ್ಬರು ಪತ್ರಿನಿತ್ಯ ಯೋಗ ಮಾಡುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಜಯಪ್ರಕಾಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಡಿ.ಸಚಿನ್, ಅಪರ ಸಿವಿಲ್ ನ್ಯಾಯಾಧೀಶ ಎ.ವಿಶ್ವನಾಥ್, ವಕೀಲ ಬಿ.ಟಿ.ನಟರಾಜ್, ವೈದ್ಯರಾದ ಡಾ.ಉಮೇಶ್, ಡಾ.ರೂಪಾ, ಯೋಗ ತರಬೇತಿದಾರರಾದ ಪ್ರಕೃತಿ, ಸುಮ, ಪುಷ್ಪ, ಮಮತ, ಪ್ರಸನ್ನ ದೇವವೃಂದ, ಅಮಿತ್ ಮತ್ತಿತರರಿದ್ದರು.