ಚಿಕ್ಕಮಗಳೂರು ಜಿಲ್ಲೆಯಲ್ಲಿ 1978ಕ್ಕೂ ಮೊದಲಿನಿಂದ ಸಾಗುವಳಿ ಮಾಡುತ್ತಿರುವ ಸಣ್ಣ ಹಿಡುವಳಿದಾರರ ಸಮಸ್ಯೆ ಪರಿಹರಿಸಲು ಜಂಟಿ ಸಮೀಕ್ಷೆ ನಡೆಸಲಾಗುವುದು, ಅದೇ ರೀತಿ ಕಾಡಾನೆಗಳು ನಾಡಿಗೆ ಬಾರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ.
ನಿನ್ನೆ ಚಿಕ್ಕಮಗಳೂರು ಜಿಲ್ಲೆಯ ಶಾಸಕರಾದ ಟಿ.ಡಿ.ರಾಜೇಗೌಡ, ಶ್ರೀಮತಿ ನಯನಾ ಮೋಟಮ್ಮ, ಮುಖಂಡರಾದ ಶ್ರೀಮತಿ ಮೋಟಮ್ಮ, ಬಿ.ಎಲ್.ಶಂಕರ್, ಎಚ್.ಎಂ.ವಿಶ್ವನಾಥ್ ಬಿ.ಎಸ್. ಜಯರಾಂ, ಕೆ.ಜಿ.ಎಫ್. ಅಧ್ಯಕ್ಷ ಹೆಚ್.ಟಿ. ಮೋಹನ್ ಕುಮಾರ್ ಅವರನ್ನು ಒಳಗೊಂಡ ನಿಯೋಗದ ಅಹವಾಲು ಆಲಿಸಿದ ಸಚಿವರು, ಅರಣ್ಯ ಭೂಮಿಯಲ್ಲಿ ಐದಾರು ದಶಕಗಳಿಂದ ಕೃಷಿ ಮಾಡುತ್ತಿರುವ ಬಡ ರೈತರ ಸಮಸ್ಯೆಯನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡುವ ಅಗತ್ಯವಿದೆ ಎಂದರು.
ಕಂದಾಯ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ಎಂದು ಮಾಡಿರುವುದರಿಂದ ಸಾವಿರಾರು ರೈತರಿಗೆ ಅಕ್ರಮ ಸಾಗುವಳಿಯನ್ನು ಸಕ್ರಮಗೊಳಿಸಿಕೊಳ್ಳಲು ಕಷ್ಟವಾಗಿದೆ. ಹಾಗಾಗಿ ಡೀಮ್ಡ್ ಫಾರೆಸ್ಟ್ ಜಾಗವನ್ನು ಪುನರ್ ಸರ್ವೇ ಮಾಡಿ ಕಂದಾಯ ಇಲಾಖೆಗೆ ಹಸ್ತಾಂತರಿಸಬೇಕು. ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅರಣ್ಯದ ಅಂಚಿನಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಈ ಭಾಗದಲ್ಲೇ 140ಕ್ಕೂ ಹೆಚ್ಚು ಆನೆಗಳಿವೆ, ಅವುಗಳ ಹಿಂಡು ತೋಟಕ್ಕೆ ಬಂದರೆ ಬೆಳೆ ನಾಶವಾಗುತ್ತದೆ, ಜನರು ಜೀವ ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ಇದೆ ನಿಯೋಗದಲ್ಲಿ ತೆರಳಿದ್ದ ಶಾಸಕರು ಮತ್ತು ಮುಖಂಡರು ತಿಳಿಸಿದರು.
ಆನೆಗಳು ನಾಡಿಗೆ ದಾಟದಂತೆ ರೈಲ್ವೆ ಬ್ಯಾರಿಕೇಡ್ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಬಾಕಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು, ಇದಕ್ಕಾಗಿ ಬಜೆಟ್ ಹೆಚ್ಚಿನ ಅನುದಾನ ಕೋರಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಅರಣ್ಯದೊಳಗೆ ಹಣ್ಣಿನ ಗಿಡಗಳನ್ನು ಬೆಳೆಸಿ, 2 ಕಿಲೋ ಮೀಟರ್ ಗೆ ಒಂದು ಕೆರೆ-ಕಟ್ಟೆ ನಿರ್ಮಿಸಿದರೆ ಆನೆಗಳು ನಾಡಿಗೆ ಬರುವುದು ಕಡಿಮೆ ಆಗುತ್ತದೆ ಎಂದು ನಿಯೋಗದ ಸದಸ್ಯರು ಸಲಹೆ ಮಾಡಿದರು. ಈ ಸಲಹೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಖಂಡ್ರೆ ತಿಳಿಸಿದರು.