ಓಡಿಸಾದ ಭುವನೇಶ್ವರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಷ್ಟ್ರ ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ ಎ.ಎಂ. ರಶ್ಮಿ ಅವರಿಗೆ ಮೂಡಿಗೆರೆ ಪಟ್ಟಣದಲ್ಲಿ ಅದ್ದೂರಿ ಸ್ವಾಗತ ಕೋರಲಾಗಿದೆ.
ಓಡಿಸ್ಸಾದಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದ ಕಬ್ಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ತಂಡದ ಸದಸ್ಯೆಯಾಗಿದ್ದ ಮೂಡಿಗೆರೆ ತಾಲೂಕಿನ ಅಣಜೂರು ಸಮೀಪದ ಪ್ಯಾಟೆಹಿತ್ಲು ಗ್ರಾಮದ ಎ.ಎಂ.ರಶ್ಮಿ ಚಿನ್ನದ ಪದಕ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
ಎ.ಎಂ.ರಶ್ಮಿ ಅವರು ಮೂಡಿಗೆರೆ ಡಿಎಸ್ಬಿಜಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬಿ.ಎ ವ್ಯಾಸಂಗ ಮಾಡುತ್ತಿದ್ದಾರೆ. ಪಿಯುಸಿಯಲ್ಲಿ ಜಿಲ್ಲಾ ಮಟ್ಟ, ಗ್ರಾಮೀಣ ಕ್ರೀಡಾಕೂಟದಲ್ಲಿ ರಾಜ್ಯಮಟ್ಟ, ದಸರಾ ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟ, ಪ್ರಥಮ ದರ್ಜೆ ಕಾಲೇಜು ವಿಭಾಗದಲ್ಲಿ ಇಂಟರ್ ಯುನಿವರ್ಸಿಟಿಯನ್ನು ಪ್ರತಿನಿಧಿಸಿದ್ದರು.
ಇದೀಗ ಕರ್ನಾಟಕ ರಾಜ್ಯ ಕಬ್ಬಡಿ ತಂಡಕ್ಕೆ ಆಯ್ಕೆಯಾಗಿದ್ದು, ಇತ್ತೀಚೆಗೆ ರಾಷ್ಟ್ರಮಟ್ಟದ ಜನ್ ಜಾತಿಯ ಖೇಲ್ ಮಹೋತ್ಸವದ ಅಂಗವಾಗಿ ಓಡಿಸಾದ ಭುವನೇಶ್ವರದಲ್ಲಿ ನಡೆದ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕ ಗಿಟ್ಟಿಸಿಕೊಂಡಿದ್ದಾರೆ. ರಶ್ಮಿ ರೈಡರ್ ಮತ್ತು ಡಿಫೆಂಡರ್ ಎರಡೂ ವಿಭಾಗದಲ್ಲಿ ಪರಿಣತಿ ಹೊಂದಿದ್ದು, ಆಲ್ರೌಂಡರ್ ಆಗಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಎ.ಎಂ.ರಶ್ಮಿ ಅವರು ಮೂಡಿಗೆರೆ ತಾಲ್ಲೂಕಿನ ಅಣಜೂರು ಪೇಟೆಹಿತ್ಲು ಗ್ರಾಮದ ಮರ್ದ ಹಾಗೂ ರಾಧಾ ದಂಪತಿಯ ಪುತ್ರಿಯಾಗಿದ್ದಾರೆ.
ಇವರಿಗೆ ಡಾ.ಮಂಜುನಾಥ್, ಟಿ.ಸುರೇಂದ್ರ, ಕೌಶಿಕ್, ಕೆ.ಎಂ.ಪೂರ್ಣೇಶ್ ಕೋಚರ್ಗಳಾಗಿದ್ದು, ರಶ್ಮಿ ಸಾಧನೆಗೆ ಚಿಕ್ಕಮಗಳೂರು ಜಿಲ್ಲಾ ಅಮೆಚೂರು ಕಬ್ಬಡಿ ಅಸೋಸಿಯೇಷನ್ ಅಧ್ಯಕ್ಷ ರಂಜನ್ ಅಜಿತ್ ಕುಮಾರ್ ಮತ್ತು ಪದಾಧಿಕಾರಿಗಳು, ಮೇಧಾ ಸ್ಪೋಟ್ರ್ಸ್ ಕ್ಲಬ್ ಪದಾಧಿಕಾರಿಗಳು ಹಾಗೂ ಡಿಎಸ್ಬಿಜಿ ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು ಶುಭ ಹಾರೈಸಿದ್ದಾರೆ.
ಚಿನ್ನದ ಪದಕ ಗೆದ್ದು ಮೂಡಿಗೆರೆಗೆ ಆಗಮಿಸಿದ ರಶ್ಮಿ ಅವರಿಗೆ ಮೂಡಿಗೆರೆಯಲ್ಲಿ ಭವ್ಯವಾದ ಸ್ವಾಗತ ಕೋರಲಾಯಿತು. ತೆರೆದ ವಾಹನದಲ್ಲಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಅಭಿನಂದಿಸಲಾಗಿದೆ.
ಸಾಮಾನ್ಯ ಕುಟುಂಬದ ರಶ್ಮಿ ತನ್ನ ಸತತ ಪರಿಶ್ರಮದಿಂದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು ಭವಿಷ್ಯದಲ್ಲಿ ಇನ್ನಷ್ಟು ಉನ್ನತ ಸಾಧನೆಯ ಕಡೆಗೆ ಸಾಗಲಿ, ಅವರಿಗೆ ಎಲ್ಲರ ಪ್ರೋತ್ಸಾಹ ಸಿಗಲಿ ಎಂದು ಆಶಿಸುತ್ತಾ ಪತ್ರಿಕೆಯ ಪರವಾಗಿ ಶುಭ ಹಾರೈಸುತ್ತೇವೆ.