ಫ್ರಾನ್ಸ್ನ ಪ್ಯಾರಿಸ್ನಲ್ಲಿ ಜುಲೈ 5 ರಿಂದ 18 ರ ವರೆಗೆ ನಡೆಯಲಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 1,500 ಮೀಟರ್ಸ್ ಓಟದ ಸ್ಪರ್ಧೆಗೆ ಮೂಡಿಗೆರೆ ತಾಲ್ಲೂಕಿನ,ಬಾಳೂರು ಹೋಬಳಿಯ,ಗುಡ್ನಳ್ಳಿ ಗ್ರಾಮದ ಅಂಧ ಕ್ರೀಡಾಪಟು ರಕ್ಷಿತಾ ರಾಜು ಆಯ್ಕೆಯಾಗಿದ್ದಾರೆ.
ಈ ವರ್ಷದ ಫೆಬ್ರುವರಿಯಲ್ಲಿ ದುಬೈಯಲ್ಲಿ ನಡೆದ ಶಾರ್ಜಾ ಅಂತರರಾಷ್ಟ್ರೀಯ ಮುಕ್ತ ಪ್ಯಾರ ಅಥ್ಲೆಟಿಕ್ಸ್ ನ 1,500 ಮೀಟರ್ಸ್ ಓಟದಲ್ಲಿ ಬೆಳ್ಳಿ ಪದಕ ಗಳಿಸಿದ್ದ ರಕ್ಷಿತಾ ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಮುಕ್ತ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 1,500 ಮೀಟರ್ಸ್ ಓಟದಲ್ಲಿ ಬೆಳ್ಳಿ ಪದಕ ಗೆದ್ದು ಕೊಂಡಿದ್ದರು. ಕಳೆದ ವರ್ಷ ನವ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 400, 800 ಹಾಗೂ 1500 ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ಗಳಿಸಿದ್ದು, ಪುಣೆಯಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 400 ಹಾಗೂ 1500ಮೀ ಓಟದಲ್ಲಿ ಚಿನ್ನ ಗೆದ್ದುಕೊಂಡಿದ್ದರು.
ರಕ್ಷಿತಾ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮೂಲಕ ತಮ್ಮ ಅಭಿನಂದನೆ ಸಲ್ಲಿಸಿದ್ದರಲ್ಲದೇ, ತಮ್ಮ ಕಛೇರಿಗೆ ಕರೆಸಿ ಗೌರವಿಸಿದ್ದರು.
‘ರಕ್ಷಿತಾ ರಾಜು ಅವರಿಗೆ ‘ಗೈಡ್ ರನ್ನರ್ ಆಗಿ ತಬರೇಶ್ ಹಾಗೂ ಸೌಮ್ಯಾ ನೆರವು ನೀಡುತ್ತಿದ್ದಾರೆ. ವಿಶ್ವ ಪ್ಯಾರಾ ಅಥ್ಲೆಟಿಕ್ಸ್ನಲ್ಲಿ ರಕ್ಷಿತಾ ಪದಕ ಗೆಲ್ಲುವ ವಿಶ್ವಾಸವಿದೆ. ಅಕ್ಟೋಬರ್ನಲ್ಲಿ ಚೀನಾದಲ್ಲಿ ನಡೆಯಲಿರುವ ಪ್ಯಾರಾ ಏಷ್ಯನ್ ಗೇಮ್ಸ್ ಗೂ ಆಯ್ಕೆಯಾಗಿದ್ದಾರೆ’ ಎಂದು ಕೋಚ್ ರಾಹುಲ್ ಬಾಲಕೃಷ್ಣ ತಿಳಿಸಿದ್ದಾರೆ.
ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಮಗಳೂರಿನ ಕೆಂಪನಹಳ್ಳಿ ಆಶಾಕಿರಣ ಶಾಲೆಯಲ್ಲಿ ಮುಗಿಸಿದ ರಕ್ಷಿತಾ ಸದ್ಯ ಬೆಂಗಳೂರಿನ ಕ್ರೀಡಾ ವಸತಿ ನಿಲಯದಲ್ಲಿದ್ದು ಪಿಯು ವಿದ್ಯಾರ್ಥಿನಿಯಾಗಿದ್ದಾರೆ.
ನಿರಂತರ ಸುದ್ದಿಗಳಿಗೆ ದರ್ಪಣ ನ್ಯೂಸ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ
https://chat.whatsapp.com/IkFCXal7O5ODMBHsmKv9ak
ಫೆಸ್ಬುಕ್ ಗೆಳತಿಯಿಂದ ಸ್ವಾಮೀಜಿಗೆ ಲಕ್ಷಾಂತರ ರುಪಾಯಿ ಪಂಗನಾಮ ; ದೂರು ದಾಖಲು