ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.
ಪ್ರತಿ ಕುಟುಂಬದ ಯಜಮಾನಿ ಮಹಿಳೆಗೆ ತಿಂಗಳಿಗೆ ರೂ. 2000 ನೀಡುವ ಈ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಜೂನ್ 15ರಿಂದ ಜುಲೈ 15 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಜುಲೈ 15ರ ನಂತರ ಅರ್ಜಿಗಳನ್ನು ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳ ಖಾತೆಗೆ ಆಗಸ್ಟ್ 15ರಿಂದ ಹಣವನ್ನು ಸಂದಾಯ ಮಾಡಲಾಗುವುದು.
* ಈ ಯೋಜನೆಯ ಫಲಾನುಭವಿ ಅಂತ್ಯೋದಯ, ಬಿ.ಪಿ.ಎಲ್ ಮತ್ತು ಎ.ಪಿ.ಎಲ್. ಕುಟುಂಬಕ್ಕೆ ಸೇರಿರಬೇಕು.
* ಅಂತ್ಯೋದಯ, ಬಿ.ಪಿ.ಎಲ್ ಮತ್ತು ಎ.ಪಿ.ಎಲ್. ಕಾರ್ಡ್ಗಳಲ್ಲಿ ಕುಟುಂಬದ ಮುಖ್ಯಸ್ಥರಾಗಿರುವ ಮಹಿಳೆಗೆ ಹಣ ಸಂದಾಯವಾಗಲಿದೆ.
* ಒಂದು ಕುಟುಂಬದ ಓರ್ವ ಮಹಿಳೆಗೆ ಮಾತ್ರ ಈ ಯೋಜನೆಯ ಸೌಲಭ್ಯ ನೀಡಲಾಗುವುದು
* ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯರಿಗೆ ಈ ಯೋಜನೆಯು ಅನ್ವಯವಾಗುವುದಿಲ್ಲ.
* ಆದಾಯ ತೆರಿಗೆ ಪಾವತಿ ಮಾಡುತ್ತಿರುವ ಮಹಿಳೆಯರಿಗೆ ಈ ಯೋಜನೆಯ ಸೌಲಭ್ಯ ಸಿಗುವುದಿಲ್ಲ
* ಮಹಿಳೆಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಅಥವಾ ಜಿ.ಎಸ್.ಟಿ. ಕಟ್ಟುತ್ತಿದ್ದರೆ ಅಂತಹರಿಗೆ ಯೋಜನೆಯ ಸೌಲಭ್ಯ ದೊರೆಯುವುದಿಲ್ಲ.
* ಈಗಾಗಲೇ ವೃದ್ದಾಪ್ಯ ಯೋಜನೆ, ಅಂಗವಿಕಲ ಯೋಜನೆ, ವಿಧವಾ ವೇತನ ಪಡೆಯುತ್ತಿದ್ದವರು ಸಹ ಗೃಹಲಕ್ಷ್ಮೀ ಯೋಜನೆಯ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ.
ಅರ್ಜಿ ಸಲ್ಲಿಸುವುದು ಹೇಗೆ ?
* ಈ ಯೋಜನೆಗೆ ಜೂನ್ 15 ರಿಂದ ಜುಲೈ 15ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.
* ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೇವಾ ಸಿಂಧು ವೆಬ್ ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು
* ನೇರವಾಗಿ ಅರ್ಜಿ ಸಲ್ಲಿಸುವವರು ಭರ್ತಿ ಮಾಡಿದ ಅರ್ಜಿಯೊಂದಿಗೆ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಗ್ರಾಮ ಒನ್ ಕೇಂದ್ರಗಳಲ್ಲಿ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಛೇರಿಗೆ ಅರ್ಜಿ ಸಲ್ಲಿಸಬಹುದು.
ಲಗತ್ತಿಸಬೇಕಾದ ದಾಖಲಾತಿಗಳು
* ಅರ್ಜಿದಾರರ ಆಧಾರ್ ಕಾರ್ಡ್ ಮತ್ತು ಪತಿಯ ಆಧಾರ್ ಕಾರ್ಡ್
* ಅರ್ಜಿದಾರರ ಚುನಾವಣ ಗುರುತಿನ ಕಾರ್ಡ್ ಮತ್ತು ಪತಿಯ ಚುನಾವಣಾ ಗುರುತಿನ ಕಾರ್ಡ್
* ಕುಟುಂಬದ ಪಡಿತರ ಕಾರ್ಡ್
* ಅರ್ಜಿದಾರರ ಬ್ಯಾಂಕ್ ಖಾತೆ ವಿವರ
ವಿ.ಸೂ. : ಅರ್ಜಿದಾರರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಮತ್ತು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಇರಬೇಕು.
* ಅರ್ಜಿದಾರರು ತಾನು ಅಥವಾ ತನ್ನ ಪತಿ ಆದಾಯ ತೆರಿಗೆ ಅಥವಾ ಜಿಎಸ್ಪಿ ತೆರಿಗೆ ಪಾವತಿದಾರರಲ್ಲ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಒಂದು ವೇಳೆ ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿದ್ದರೆ, ತಪ್ಪು ಮಾಹಿತಿ ನೀಡಿರುವುದು ತಿಳಿದುಬಂದರೆ ಅಂತವರಿಗೆ ನೀಡಿರುವ ಹಣವನ್ನು ವಾಪಾಸ್ಸು ವಸೂಲಿ ಮಾಡಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ನಿರಂತರ ಸುದ್ದಿಗಳಿಗೆ ದರ್ಪಣ ನ್ಯೂಸ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ
https://chat.whatsapp.com/IkFCXal7O5ODMBHsmKv9ak