ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿರುವ ಕುಟುಂಬಗಳಿಗೂ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ ಸೌಲಭ್ಯ ತಲುಪಿಸಲು ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಈ ಹಿಂದಿನ ಮಾರ್ಗಸೂಚಿಯಲ್ಲಿ ಅಗತ್ಯ ಬದಲಾವಣೆಯೊಂದಿಗೆ ಪರಿಷ್ಕೃತ ಆದೇಶ ಹೊರಡಿಸಲು ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದು ಬಾಡಿಗೆ ಮನೆಯವರಿಗೂ ಉಚಿತ ವಿದ್ಯುತ್ ನೀಡಲು ತೀರ್ಮಾನಿಸಲಾಗಿದೆ ಎಂದಿದ್ದಾರೆ. ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ಬಹುಪಾಲು ಕುಟುಂಬಗಳು ಬಾಡಿಗೆ ಮನೆಗಳಲ್ಲಿ ನೆಲೆಸಿವೆ ಪ್ರತಿ ಮನೆಗೂ ಪ್ರತ್ಯೇಕ ವಿದ್ಯುತ್ ಮೀಟರ್ ಇದ್ದರು ಸಹ ಎಲ್ಲಾ ಸಂಪರ್ಕಗಳು ಕಟ್ಟಡದ ಮಾಲೀಕರ ಹೆಸರಿನಲ್ಲಿರುವ ಕಾರಣ ಆ ಕುಟುಂಬಗಳಿಗೆ ಈಗಿನ ಮಾನದಂಡದಲ್ಲಿ ಸೌಲಭ್ಯ ಸಿಗುವುದಿಲ್ಲ ಹಾಗಾಗಿ ಈಗ ಮಾನದಂಡಗಳ ಬದಲಾವಣೆಗೆ ಸೂಚಿಸಲಾಗಿದೆಎಂದಿದ್ದಾರೆ.
ಒಂದು ಕಟ್ಟಡದಲ್ಲಿ ಅನೇಕ ಮನೆಗಳಿದ್ದರೆ ಕಟ್ಟಡದ ಮಾಲೀಕರ ಹೆಸರಿನಲ್ಲಿ ಇರುವ ಆರ್ ಆರ್ ನಂಬರ್ ನೊಂದಿಗೆ ಬಾಡಿಗೆದಾರರು ತಮ್ಮ ಆಧಾರ್ ನಂಬರ್ ಮತ್ತು ಬಾಡಿಗೆ ಕರಾರು ಪತ್ರವನ್ನು ಜೋಡಿಸಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಯೋಜನೆ ಜಾರಿಯಲ್ಲಿ ತಾಂತ್ರಿಕ ತೊಡಕು
ರಾಜ್ಯದಲ್ಲಿ 2 ಕೋಟಿ 15 ಲಕ್ಷ ವಿದ್ಯುತ್ ಸಂಪರ್ಕಗಳಿದ್ದು ಒಬ್ಬರ ಹೆಸರಿನಲ್ಲಿ ಒಂದು ಆರ್ ಆರ್ ಸಂಖ್ಯೆಯನ್ನು ಪರಿಗಣಿಸುವುದು ಸೂಕ್ತ ಎಂಬ ಲೆಕ್ಕಾಚಾರಕ್ಕೆ ಬರಲಾಗಿತ್ತು. ಸರ್ಕಾರದ ಯೋಜನೆಯ ಫಲಾನುಭವಿಗಳ ಲೆಕ್ಕಕ್ಕಾಗಿ ಆಧಾರ್ ಸಂಖ್ಯೆಯನ್ನು ವಿದ್ಯುತ್ ಗ್ರಾಹಕರ ಐಡಿಯೊಂದಿಗೆ ಜೋಡಿಸಲು ನಿರ್ಧರಿಸಲಾಗಿತ್ತು. ಆದರೆ ಬಾಡಿಗೆ ಮನೆಯವರಿಗೂ ಯೋಜನೆ ವಿಸ್ತರಿಸುವ ತೀರ್ಮಾನದಂತೆ ಫಲಾನುಭವಿಯನ್ನು ನಿರ್ದಿಷ್ಟವಾಗಿ ಗುರುತಿಸುವ ಮಾನದಂಡ ನಿಗದಿ ಮಾಡುವುದು ಹೇಗೆ ಎಂಬ ಬಗ್ಗೆ ಅಧಿಕಾರಿಗಳು ಗೊಂದಲಕ್ಕೆ ಈಡಾಗಿದ್ದಾರೆ.
ಬಾಡಿಗೆ ವಾಸಿಗಳು ಮನೆ ಖಾಲಿ ಮಾಡಿದರೆ ಹೇಗೆ ? ಎಂಬ ಗೊಂದಲದ ಪ್ರಶ್ನೆಗಳು ಎದುರಾಗಿವೆ. ಮುಖ್ಯವಾಗಿ ಬಾಡಿಗೆ ಕರಾರು ಪತ್ರದೊಂದಿಗೆ ಬಾಡಿಗೆದಾರರು ಯೋಜನೆ ಅಡಿ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದರು ಸಹ ಕಟ್ಟಡಗಳ ಮಾಲೀಕರು ದಾಖಲೆಗಳನ್ನು ಒದಗಿಸಲು ಹಿಂದೇಟು ಹಾಕುವ ಸಂಭವವಿದೆ.
ಇಂತಹ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಇಲಾಖೆಗೆ ಸವಾಲಾಗಿ ಪರಿಣಮಿಸಿದೆ