ಕಾಫಿ ಬೆಳಗಾರರು ಇಂದು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಎಲ್ಲ ಸವಾಲುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾದರೆ ಬೆಳಗಾರರು ಸಂಘಟಿತರಾಗಬೇಕೆಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್ ಟಿ. ಮೋಹನ್ ಕುಮಾರ್ ಅಭಿಪ್ರಾಯಸಿದ್ದಾರೆ.
ಅವರು ಮಂಗಳವಾರ ಮೂಡಿಗೆರೆ ಪ್ಲಾಂಟರ್ಸ್ ಕ್ಲಬ್ ಆವರಣದಲ್ಲಿ ಮೂಡಿಗೆರೆ ಬೆಳಗಾರರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಬೆಳೆಗಾರರ ಒಕ್ಕೂಟದ 25ನೇ ಮಾಸಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಸರ್ಕಾರವು ಕಾಫಿ ಬೆಳೆಗಾರರ ನೆರವಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ, ರಾಷ್ಟ್ರದ ವಿದೇಶಿ ವಿನಿಮಯದಲ್ಲಿ ಕಾಫಿ ಬೆಳಗಾರರ ಪಾತ್ರ ಪ್ರಮುಖವಾಗಿದೆ. ಇಂದು ಪ್ರಾಕೃತಿಕ ವಿಕೋಪದ ಕಾರಣದಿಂದ, ಮಾರುಕಟ್ಟೆ ಏರಿಳಿತದ ಕಾರಣದಿಂದ, ಕಾಫಿ ಉತ್ಪಾದನಾ ವೆಚ್ಚದ ಹೆಚ್ಚಳದಿಂದ ಬೆಳೆಗಾರರು ತೀವ್ರ ನಷ್ಟವನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಫಿ ಬೆಳೆಗಾರರಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಮಾತನಾಡಿ ಸರ್ಕಾರಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಬೆಳೆಗಾರರಿಗೆ ನೀಡುವ ಕಾಯ್ದೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅನುಮೋದನೆ ದೊರೆತಿದೆ. ಇದೀಗ ಇದರ ಅನುಷ್ಠಾನದ ವಿಚಾರವಾಗಿ ವಿಶೇಷವಾಗಿ ಅರಣ್ಯ ಮತ್ತು ಕಂದಾಯ ಭೂಮಿ ವಿಷಯದಲ್ಲಿ ಇರುವ ತಡೆಯನ್ನು ಸರ್ಕಾರ ನಿವಾರಿಸಬೇಕು. ಕಾಫಿ ಬೆಳಗಾರರಿಗೆ 10 ಹೆಚ್.ಪಿ. ವರೆಗಿನ ವಿದ್ಯುತ್ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವುದು, ಕಾಡಾನೆ ಮತ್ತು ಮಾನವ ಸಂಘರ್ಷದ ವಿಷಯದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದಿದ್ದಾರೆ.
ಸಭೆಯಲ್ಲಿ ಈ ಹಿಂದಿನ ಮೀಟಿಂಗಿನ ನಡವಳಿಗಳನ್ನು ಓದಿ ದಾಖಲಿಸಲಾಯಿತು, ಹಣಕಾಸಿನ ವಿಷಯದ ಬಗ್ಗೆ ಮತ್ತು ಮುಖ್ಯವಾದ ಪತ್ರ ವ್ಯವಹಾರಗಳ ಬಗ್ಗೆ ಚರ್ಚಿಸಲಾಯಿತು. ಬೆಂಗಳೂರಿನಲ್ಲಿ ನಡೆಯಲಿರುವ ವಿಶ್ವ ಕಾಫಿ ಸಮ್ಮೇಳನದ ಬಗ್ಗೆ, ಬೆಳೆಗಾರ ಪತ್ರಿಕೆಯ ಬೆಳವಣಿಗೆಯ ಬಗ್ಗೆ ಸಭೆಗೆ ಮಾಹಿತಿ ನೀಡಲಾಯಿತು. ಬ್ಯಾಂಕುಗಳು ಬೆಳೆಗಾರರನ್ನು ವಿವಿಧ ರೀತಿಯಲ್ಲಿ ಶೋಷಣೆ ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ಬೆಳೆಗಾರರು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಸಭೆಯಲ್ಲಿ ಕರ್ನಾಟಕ ಬೆಳಗಾರರ ಸಂಘದ ಕಾರ್ಯದರ್ಶಿ ಕೆ.ಬಿ ಕೃಷ್ಣಪ್ಪ, ಖಜಾಂಚಿ ಎಚ್. ಎಂ. ಉಪಾಧ್ಯಕ್ಷರಾದ ಬಿ. ಎಂ. ನಾಗರಾಜ್ ಎ.ಕೆ ವಸಂತೇಗೌಡ, ಸಂಘಟನಾ ಕಾರ್ಯದರ್ಶಿಗಳಾದ ಎ.ಎನ್. ನಾಗರಾಜು, ಕೆ.ವಿ. ನರೇಂದ್ರ, ಮೂಡಿಗೆರೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮನೋಹರ್, ಕೆಜಿಎಫ್ ನ ಮಾಜಿ ಅಧ್ಯಕ್ಷರಾದ ಜಗನ್ನಾಥ್ ಬಿ.ಎಸ್. ಜಯರಾಮ್, ಸಹಕಾರಿ ಮುಖಂಡರಾದ ಹಳಸೆ ಶಿವಣ್ಣ ಮುಂತಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ತಾಲೂಕು ಮತ್ತು ಹೋಬಳಿ ಬೆಳೆಗಾರರ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು.
ನಿರಂತರ ಸುದ್ದಿ ಹಾಗೂ ಉಪಯುಕ್ತ ಮಾಹಿತಿಗಳಿಗಾಗಿ ದರ್ಪಣ ನ್ಯೂಸ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ
https://chat.whatsapp.com/IkFCXal7O5ODMBHsmKv9ak
ಉಚಿತ ಬಸ್ ಪ್ರಯಾಣದ ‘ಶಕ್ತಿ ಯೋಜನೆ’ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ