ಋಷಿಮೂಲಕ್ಕಿಂತ ಋಷಿಗಳ ತತ್ವ ಸಂದೇಶಗಳು ಮುಖ್ಯವಾಗಬೇಕಿದೆ ಎಂದು ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಮೂಡಿಗೆರೆ ತಾಲ್ಲೂಕಿನ ಜಾವಳಿಯ ಶ್ರೀಹೇಮಾವತಿ ನದಿಮೂಲ ಮಹಾಗಣಪತಿ ಸ್ವಾಮಿ ಹಾಗೂ ನಾಗದೇವರ ಅಷ್ಟಬಂಧ ಪುನರ್ ಪ್ರತಿಷ್ಠಾಪನೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಭಾರತೀಯ ಸಂಸ್ಕøತಿಯಲ್ಲಿ ಅಪಾರವಾಗಿರುವ ಜ್ಞಾನವನ್ನು ಋಷಿಗಳು ನಮಗೆ ಪರಂಪರೆಯಿಂದ ಕೊಟ್ಟಿದ್ದಾರೆ. ಆದರೆ ಋಷಿಗಳ ಮೂಲವನ್ನು ಹುಡುಕಬಾರದು ಎನ್ನುತ್ತಾರೆ. ಅವರ ಮೇಲಿರುವ ಪೂಜ್ಯ ಭಾವನೆ ಕಡಿಮೆಯಾಗಬಾರದು ಎಂಬ ಕಾರಣಕ್ಕೆ ಋಷಿಮೂಲವನ್ನು ಹುಡುಕಬಾರದು ಎನ್ನುತ್ತಾರೆ. ಪ್ರಪಂಚದಲ್ಲಿ ಎಲ್ಲಾ ಆಗುಹೋಗುಗಳು ಚೈತನ್ಯ ಸ್ವರೂಪಿಯಾದ ಭಗವಂತನ ಇಚ್ಚೆಯಂತೆ ನಡೆಯುತ್ತದೆ. ಭಕ್ತಿ ಶ್ರದ್ದೆಯಿಂದ ಭಗವಂತನ ಆರಾಧನೆ ಮಾಡಿದಲ್ಲಿ ವಾಸ್ತವದ ಅರಿವು ನಮಗಾಗುತ್ತದೆ.. ಬದುಕಿನಲ್ಲಿ ಯಶಸ್ಸನ್ನು ಪಡೆಯಲು, ಸುಖ, ಶಾಂತಿ ಸಮೃದ್ದಿಯನ್ನು ಕಾಣಲು ನಂಬಿಕೆಯನ್ನು ಸದಾ ಉಳಿಸಿಕೊಳ್ಳಬೇಕು. ನಂಬಿಕೆ ಇದ್ದಾಗ ಬದುಕಿನಲ್ಲಿ ಸುಖ ಶಾಂತಿಯನ್ನು ಹೊಂದಲು ಸಾಧ್ಯವಾಗುತ್ತದೆ ಎಂದರು.
ಶ್ರೀಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಡಾ.ಜಿ.ಭೀಮೇಶ್ವರ ಜೋಷಿ ಮಾತನಾಡಿ, ಜಾವಳಿಯ ಶ್ರೀ ಹೇಮಾವತಿ ನದಿಮೂಲದ ಶ್ರೀಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸವಿದ್ದು ಸರ್ಕಾರ ಹಾಗೂ ಜನರ ನೆರವಿನಿಂದ ಈ ಕ್ಷೇತ್ರ ಜೀರ್ಣೋದ್ದಾರಗೊಂಡಿದೆ ಹೇಮಾವತಿ ನದಿಮೂಲದ ಮಹಾಗಣಪತಿಸ್ವಾಮಿ ಹಾಗೂ ನಾಗದೇವರ ಶ್ರೀಕ್ಷೇತ್ರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತರಾಗಬೇಕಿದೆ ಎಂದರು.
ಶಾಸಕಿ ನಯನ ಮೋಟಮ್ಮ ಮಾತನಾಡಿ, ಶಾಸಕಿಯಾದ ನಂತರ ನನ್ನ ಎರಡನೇ ಕಾರ್ಯಕ್ರಮ ಇದಾಗಿದೆ. ನನ್ನ ಅಧಿಕಾರವಧಿಯಲ್ಲಿ ಧಾರ್ಮಿಕ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತೇನೆ. ದೇವಸ್ಥಾನಗಳ ಅಭಿವೃದ್ದಿಗೆ ಅನುದಾನ ಮೀಸಲಿಡುತ್ತೇನೆ. ಹೇಮಾವತಿ ನದಿ ಜಾವಳಿಯಲ್ಲಿ ಹುಟ್ಟಿ ಬಾಳೂರು, ಕೊಟ್ಟಿಗೆಹಾರ, ಮೂಡಿಗೆರೆ, ಸಕಲೇಶಪುರ, ಹಾಸನ, ಗೊರೂರಿನಲ್ಲಿ ಹರಿದು ನದಿ ತೀರಗಳನ್ನು ಹಸಿರಾಗಿಸಿದೆ. ಸಾವಿರಾರು ಊರುಗಳಿಗೆ ನೀರುಣಿಸುವ ಜಾವಳಿಯ ಹೇಮಾವತಿ ನದಿಯ ಮೂಲ ಅತ್ಯಂತ ಪುಣ್ಯ ಕ್ಷೇತ್ರವಾಗಿದೆ. ನದಿಮೂಲದ ಉಳಿವಿಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು.
ಅಷ್ಠಬಂಧ ಪುನರ್ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ದೇವಸ್ಥಾನ ಆವರಣವನ್ನು ತಳಿರುತೋರಣ ಪುಷ್ಪಾಲಂಕಾರ ಹಾಗೂ ವಿದ್ಯುತ್ ದೀಪಗಳಿಂದ ಆಕರ್ಷಕವಾಗಿ ಸಿಂಗರಿಸಲಾಗಿತ್ತು. ವಿವಿಧ ಊರುಗಳಿಂದ ಆಗಮಿಸಿದ್ದ ನೂರಾರು ಭಕ್ತಾಧಿಗಳು ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡು ಹಣ್ಣುಕಾಯಿ ಅರ್ಪಿಸಿ ದೇವರ ದರ್ಶನ ಪಡೆದರು. ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಉಪಸಭಾಪತಿಗಳಾದ ಎಂ.ಕೆ.ಪ್ರಾಣೇಶ್, ಮಾಜಿ ಸಚಿವರಾದ ಮೋಟಮ್ಮ, ಮಾಜಿ ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಜಾವಳಿ ಗ್ರಾ.ಪಂ ಅಧ್ಯಕ್ಷರಾದ ಸಂಧ್ಯಾ ಸುರೇಶ್, ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಸುರೇಶ್ಗೌಡ, ಕಾರ್ಯದರ್ಶಿ ಎಂ.ವಿ. ಜಗದೀಶ್ಗೌಡ, ಸಂಚಾಲಕರಾದ ಜೆ.ಜಿ. ಶಶಿಧರ್, ಪರೀಕ್ಷಿತ್ ಜಾವಳಿ, ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ಪ್ರವೀಣ್ ಗುರ್ಜರ್, ಯಶವಂತ್ ಗುರ್ಜರ್, ಧೀರಜ್ ಪ್ರಭು, ನಾರಾಯಣಗೌಡ, ಮಂಜಪ್ಪಯ್ಯ, ಸತೀಶ್, ಸತೀಶ್ ಮಲೆಮನೆ, ರವಿ, ಚನ್ನಕೇಶವಗೌಡ, ಸಂಪತ್,ಯಮುನಮ್ಮ ಮುಂತಾದವರು ಇದ್ದರು.