ಮಾದಕ ವಸ್ತುಗಳು ಎಷ್ಟು ಅಪಾಯವೋ, ಹಣ, ಜ್ಞಾನ, ಸೌಂದರ್ಯ, ಅಧಿಕಾರ ಸೇರಿದಂತೆ ಹಲವಾರು ಮಾದಕ ವಿಚಾರಗಳು ಕೂಡ ಅಷ್ಟೇ ಅಪಾಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಜನಜಾಗೃತಿ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಪ್ರಶಾಂತ್ ಚಿಪ್ರಗುತ್ತಿ ಹೇಳಿದರು.
ಅವರು ಬುಧವಾರ ಪಟ್ಟಣದ ಸೈಂಟ್ ಮಾರ್ಥಸ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಏರ್ಪಡಿಸಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಲೆಕ್ಕವಿಲ್ಲದಷ್ಟು ದೇವಸ್ಥಾನ, ಚರ್ಚ್, ಮಸೀದಿ, ಮಠ, ಶಾಲೆ ಕಾಲೇಜುಗಳಿದ್ದರೂ ಈ ದೇಶದಲ್ಲಿ ಮೋಸ, ಭ್ರಷ್ಟಾಚಾರ, ಅಧರ್ಮ ನಡೆಯುತ್ತಿರುವುದು ದುರಂತ. ಇಂತಹ ಮಾದಕ ವಿಚಾರಗಳನ್ನು ಮನಸ್ಸನ್ನು ಕಲ್ಮಶ ಮಾಡಿಕೊಂಡು ಸಮಾಜವನ್ನೇ ಹಾಳು ಮಾಡುವ ವ್ಯವಸ್ಥೆ ನಡೆಯುತ್ತಿದೆ. ಇದು ಬದಲಾಗಬೇಕು. ಎಲ್ಲಾಧರ್ಮ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸಂಸ್ಕಾರದ ಪಾಠ ಉಣಬಡಿಸಿದರೆ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಉದಯಶಂಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀಮಂತಿಕೆ ಹಾಗೂ ಹಣವಿದ್ದ ಮಾತ್ರಕ್ಕೆ ಕೋಟ್ಯಾಧಿಪತಿಗಳೆನಿಸಿಕೊಳ್ಳುವುದಿಲ್ಲ. ನಿಜವಾದ ಕೋಟ್ಯಾಧಿಪತಿಗಳೆಂದರೆ ಅದು ಆರೋಗ್ಯವಂತರು ಮಾತ್ರ. ಹಾಗಾಗಿ ದೈಹಿಕ, ಮಾನಸಿಕವಾಗಿ ಆರೋಗ್ಯವಂತರಾಗಬೇಕೆಂದರೆ ದುಶ್ಚಟದಿಂದ ದೂರವಿರಬೇಕೆಂದು ಹೇಳಿದರು.
ಕಾಲೇಜು ಪ್ರಾಂಶುಪಾಲೆ ವೀಣಾ ಸಿಸ್ಟರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾದಕ ವಸ್ತು ಹಾಗೂ ವಿಚಾರಗಳ ಬಗ್ಗೆ ಹೆಚ್ಚಾಗಿ ಕಾರ್ಯಕ್ರಮಗಳು ನಡೆಯಬೇಕು. ಮುಖ್ಯವಾಗಿ ಯುವ ಜನಾಂಗ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಿಕೊಳ್ಳುವ ಜತೆಗೆ, ನೆರೆ ಹೊರೆಯವರಿಗೂ ಅರಿವು ಮೂಡಿಸಬೇಕೆಂದು ಮನವಿ ಮಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟಿ ಯೋಜನಾಧಿಕಾರಿ ಪಿ.ಶಿವಾನಂದ, ಮೇಲ್ವಿಚಾರಕ ದಾಮೋದರ, ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣ ಘಟಕದ ಮಾಸ್ಟರ್ ಪ್ರವೀಣ್ ಪೂಜಾರಿ, ಪ್ರಾರ್ಥನೆ ಹಾಡಿದ ವಿದ್ಯಾರ್ಥಿನಿ ಪೂರ್ಣವಿ ಉಪಸ್ಥಿತರಿದ್ದರು.