ನಿನ್ನೆ ಚಿಕ್ಕಮಗಳೂರಿನಲ್ಲಿ ತಾನೇ ಹಿಡಿದ ನಾಗರ ಹಾವು ಕಚ್ಚಿ ಸಾವನ್ನಪ್ಪಿದ ಸ್ನೇಕ್ ನರೇಶ್ ಮನೆಯಲ್ಲಿ ರಾಶಿ ರಾಶಿ ಹಾವುಗಳು ಪತ್ತೆಯಾಗಿವೆ.
ನಿನ್ನೆ ನರೇಶ್ ಮನೆಗೆ ಭೇಟಿ ನೀಡಿದ್ದ ಅರಣ್ಯ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು, ಸಾರ್ವಜನಿಕರು ಅವರ ಮನೆಯ ತುಂಬೆಲ್ಲ ಇದ್ದ ಹಾವು ತುಂಬಿಸಿಟ್ಟಿದ್ದ ಚೀಲಗಳನ್ನು ಕಂಡು ಹೌಹಾರಿದ್ದಾರೆ.
ಹಾವು ತುಂಬಿದ ಚೀಲಗಳು ಮನೆಯಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದವು. ಪೈಬರ್ ಡ್ರಮ್ ಒಂದರ ಮುಚ್ಚಳ ತೆಗೆದಾಗ ಹತ್ತಾರು ಕೊಳಕ ಮಂಡಲ ಹಾವಿನ ಮರಿಗಳು ಕಂಡು ಬಂದವು.
ನರೇಶ್ ಏಕೆ ಇಷ್ಟೊಂದು ಹಾವುಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದರು ಎಂಬುದು ಪ್ರಶ್ನಾರ್ಥಕವಾಗಿದೆ.
ಮನೆಯಲ್ಲಿದ್ದ ಹಾವುಗಳನ್ನು ಅರಣ್ಯ ಸಿಬ್ಬಂದಿ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ನಿನ್ನೆ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿ ಹಿಡಿದು ಚೀಲದಲ್ಲಿ ತುಂಬಿಸಿ ಸ್ಕೂಟಿಯ ಡಿಕ್ಕಿಯಲ್ಲಿ ಇಟ್ಟಿದ್ದ ಹಾವೊಂದು ಚೀಲದಿಂದ ಹೊರಬಂದು ಸ್ನೇಕ್ ನರೇಶ್ ಅವರಿಗೆ ಕಚ್ಚಿದ ಪರಿಣಾಮ ನರೇಶ್ ಸಾವನ್ನಪ್ಪಿದರು.