ಮೂಡಿಗೆರೆ ತಾಲೂಕಿನಲ್ಲಿ ಈ ಹಿಂದಿನ ಅವಧಿಯಲ್ಲಿ ಮಿತಿಮೀರಿದ ಭ್ರಷ್ಟಾಚಾರ ನಡೆದಿದೆ. ರಸ್ತೆ, ಕಟ್ಟಟ ಮುಂತಾದ ಕಾಮಗಾರಿಗಳು ಕೆಲವೇ ತಿಂಗಳಲ್ಲಿ ಹಾಳಾಗುತ್ತಿದೆ. ಇದೀಗ ಹೊಸ ಸರಕಾರ ಬಂದಿದೆ. ಸ್ಥಳೀಯ ಶಾಸಕಿ ನಯನಾ ಮೋಟಮ್ಮ ಅವರು ಆಡಳಿತ ಪಕ್ಷದವರೇ ಆಗಿದ್ದಾರೆ. ಅವರು ಸಂಘ ಸಂಸ್ಥೆಗಳು, ಗ್ರಾಮಸಭೆಗಳ ಅಭಿಪ್ರಾಯ ಸಂಗ್ರಹಿಸಿ ತಾಲೂಕಿನ ಜ್ವಲಂತ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಬೇಕೆಂದು ರೈತ ಮುಖಂಡ ಡಿ.ಎಸ್.ರಮೇಶ್ಗೌಡ ಒತ್ತಾಯಿಸಿದರು.
ಸೋಮವಾರ ಮೂಡಿಗೆರೆ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಕದ ಹೊರ ಜಿಲ್ಲೆಯಾದ ಹಾಸನ ಮತ್ತು ಶಿವಮೊಗ್ಗ ಭಾಗದ ಹಳ್ಳಿಗಳಲ್ಲಿ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿದ್ದು, ಮೂಡಿಗೆರೆ ತಾಲೂಕಿನಲ್ಲಿ ಮಾತ್ರ ಹಿಂದಿನಿಂದಲೂ ವಿದ್ಯುತ್ ಸಮಸ್ಯೆ ಎದುರಿಸುವಂತಾಗಿದೆ. ಚಿಕ್ಕಮಗಳೂರಿನಿಂದ ನೇರವಾಗಿ ಒನ್ ಲೈನ್ ಮೂಲಕ ವಿದ್ಯುತ್ ಪೂರೈಕೆ ಮಾಡಬೇಕು. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ತಾಲೂಕಿನಲ್ಲಿ ಆನೆ ಬಿಡಾರ ಸ್ಥಾಪಿಸಬೇಕು. ಆಡಳಿತ ವ್ಯವಸ್ಥೆ ಸಂಪೂರ್ಣ ಬದಲಾಯಿಸಿ ತಾಲೂಕಿನ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಬೇಕೆಂದು ಒತ್ತಾಯಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಡಿ.ಆರ್. ಪುಟ್ಟಸ್ವಾಮಿಗೌಡ ಮಾತನಾಡಿ, ಕಳೆದ ವರ್ಷ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಚಿಕ್ಕಮಗಳೂರಿನಿಂದ ಮೂಡಿಗೆರೆವರೆಗೆ ರಸ್ತೆ ಅಗಲೀಕರಣ ಮಾಡಲಾಗುವುದು ಎಂದು ಹೇಳಿದ್ದು, ಇದೂವರೆಗೆ ರಸ್ತೆ ಅಗಲೀಕರಣವಾಗಿಲ್ಲ. ಅವರು ಕ್ಷೇತ್ರಕ್ಕೆ ಬಂದಾಗ ಬಿಜೆಪಿ ಕಾರ್ಯಕರ್ತರೊಂದಿಗೆ ಮಾತ್ರ ತಿರುಗಾಡಿ ತೆರಳುತ್ತಾರೆ ಹೊರತು ಜನ ಸಾಮಾನ್ಯರ ಬೇಟಿ ಮಾಡಿ ಸಮಸ್ಯೆ ಆಲಿಸುವುದಿಲ್ಲ. ಹಿಂದಿನ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ರೈತರಿಗೆ 0 ಪರ್ಸೆಂಟೇಜ್ನಲ್ಲಿ 5 ಲಕ್ಷ ಸಾಲ ನೀಡುತ್ತೇವೆಂದು ಹೇಳಿದ್ದರು. ಈಗಿನ ಸರಕಾರ 10 ಲಕ್ಷ ಸಾಲ ನೀಡುತ್ತವೆಂದು ಹೇಳಿದೆ. ಆ ಸಾಲ ಮುಂಗಾರು ಪೂರ್ವದಲ್ಲಿಯೇ ಸಕಾಲದಲ್ಲಿ ನೀಡುವಂತೆ ಸರಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ವಾಸುದೇವ ಸತ್ತಿಗನಹಳ್ಳಿ ಉಪಸ್ಥಿತರಿದ್ದರು.