ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಇದು ಮಧ್ಯಾಹ್ನದಿಂದ ಧಾರಾಕಾರ ಮಳೆ ಸುರಿಯುತ್ತಿದೆ. ವಿಶೇಷವಾಗಿ ಮಲೆನಾಡು ಭಾಗದಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆ ಸುರಿಯುತ್ತಿದೆ. ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಬಾಳೆಹೊನ್ನೂರು, ಗೋಣಿಬೀಡು ಸುತ್ತಮುತ್ತ ವ್ಯಾಪಕ ಮಳೆಯಾಗಿದೆ.
ಶೃಂಗೇರಿ ತಾಲ್ಲೂಕಿನ ಕುಂಚೇಬೈಲು ಎಂಬಲ್ಲಿ ಬೃಹತ್ ಗಾತ್ರದ ಮರವೊಂದು ಬಿದ್ದು ಓಮ್ನಿ ಕಾರು ಸಂಪೂರ್ಣ ಜಖಂ ಆಗಿದೆ.
ಕಟ್ಟಡ ಗುತ್ತಿಗೆದಾರ ಪ್ರದೀಪ್ ಎಂಬುವವರ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಬೃಹತ್ ಮರ ಉರುಳಿ ಬಿದ್ದಿದೆ. ಕಾರಿನಲ್ಲಿ ತೋಟಕ್ಕೆ ಜನ ಕರೆದೊಯ್ದು ಮನೆಗೆ ಊಟಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ.
ಘಟನೆ ನಡೆಯುವ ಕೆಲ ನಿಮಿಷಗಳ ಹಿಂದಷ್ಟೇ ಪ್ರದೀಪ್ ಕಾರಿನಿಂದ ಇಳಿದು ಮನೆಗೆ ತೆರಳಿದ್ದರು ಎನ್ನಲಾಗಿದೆ.
ಮರಬಿದ್ದಿದ್ದರಿಂದ ಚಿಕ್ಕಮಗಳೂರು-ಶೃಂಗೇರಿ ನಡುವಿನ ರಸ್ತೆ ಸಂಚಾರ ಸಮಾರು ಒಂದು ಗಂಟೆಗೂ ಹೆಚ್ಚಿನ ಕಾಲ ಸ್ಥಗಿತಗೊಂಡು ವಾಹನ ಸವಾರರು ಪರದಾಡುವಂತಾಗಿತ್ತು.
ಮಲೆನಾಡಿನಲ್ಲಿ ಕಳೆದ ಮೂರು ದಿನದಿಂದ ನಿರಂತರ ಮಳೆಯಾಗುತ್ತಿದ್ದು, ಮುಂದಿನ ಎರಡು ದಿನಗಳ ಕಾಲವೂ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಮೂಡಿಗೆರೆ : ಬಿರುಗಾಳಿ ಸಹಿತ ಬಾರೀ ಮಳೆ- ಸ್ಕೂಟಿ ಮೇಲೆ ಮರಬಿದ್ದು ವ್ಯಕ್ತಿ ಸಾವು