ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಸಿದ್ದರಾಮಯ್ಯ ತನ್ನ ಸಂಪುಟದ ಮೊದಲ ಸಭೆಯನ್ನು ಇಂದು ವಿಧಾನಸೌಧದಲ್ಲಿ ನಡೆಸಿದರು.
ಸಂಪುಟ ಸಭೆಯ ನಂತರ ಮುಖ್ಯಮಂತ್ರಿಯವರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಮುಖ್ಯಮಂತ್ರಿಯವರು ತನ್ನ ಮೊದಲ ಸುದ್ದಿಗೋಷ್ಠಿಯಲ್ಲಿ ಸಂಪುಟ ಸಭೆಯಲ್ಲಿ ಚರ್ಚೆಯಾದ ಕಾಂಗ್ರೇಸ್ ಪಕ್ಷದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ವಿವರಣೆ ನೀಡಿದರು.
ಕಾಂಗ್ರೇಸ್ ಅನೇಕ ಭರವಸೆಗಳನ್ನು ನೀಡಿದೆ ಆ ಎಲ್ಲಾ ಭರವಸೆಗಳನ್ನು ಐದು ವರ್ಷದ ಅವಧಿಯಲ್ಲಿ ಜಾರಿಗೆ ತರುತ್ತೇವೆ. ಪ್ರಮುಖವಾಗಿ ನೀಡಿರುವ ಐದು ಗ್ಯಾರಂಟಿ ಭರವಸೆಗಳನ್ನು ಮೊದಲ ಸಂಪುಟ ಸಭೆಯಲ್ಲೇ ಜಾರಿಗೆ ತರುವ ಬಗ್ಗೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹೇಳಿದ್ದೆವು. ನಮ್ಮ ಸರ್ಕಾರ ನುಡಿದಂತೆ ನಡೆವ ಸರ್ಕಾರ. ಹಿಂದಿನ 2013ರಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಾಗ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. ಅಲ್ಲದೇ ಹೆಚ್ಚುವರಿಯಾಗಿ 30 ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ.
ನಾವು ನೀಡಿರುವ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ವಾರ್ಷಿಕ 50 ಸಾವಿರ ಕೋಟಿ ಅನುದಾನ ಬೇಕಾಗುತ್ತದೆ. ರಾಜ್ಯದ ಬಜೆಟ್ 3 ಲಕ್ಷದ 10 ಸಾವಿರ ಕೋಟಿ ಗಾತ್ರದಾಗಿದೆ. 50 ಸಾವಿರ ಕೋಟಿ ಹಣವನ್ನು ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲು ಮೀಸಲಿಡಲಾಗುವುದು. ಈ ಅನುದಾನವನ್ನು ಹೊಂದಿಸಲು ರಾಜ್ಯದಲ್ಲಿ ಆರ್ಥಿಕ ಶಿಸ್ತು ಜಾರಿಗೆ ತಂದು ಜನರಿಗೆ ನೀಡಿದ ಭರವಸೆ ಈಡೇರಿಸಲಾಗುವುದು ಎಂದಿದ್ದಾರೆ. 15 ಸಾವಿರ ಕೋಟಿಯನ್ನು ಕಟ್ಟುನಿಟ್ಟಿನ ತೆರಿಗೆ ವಸೂಲಾತಿಯಿಂದ ಹೆಚ್ಚುವರಿಯಾಗಿ ಸಂಗ್ರಹಿಸಲಾಗುವುದು.
1. ಗೃಹಜ್ಯೋತಿ : 200 ಯುನಿಟ್ ಎಲ್ಲಾ ಮನೆಗಳಿಗೆ ಉಚಿತವಾಗಿ ನೀಡಲಾಗುವುದು. ಇದಕ್ಕೆ ಅಂದಾಜು ಒಂದು ತಿಂಗಳಿಗೆ 1200 ಕೋಟಿ ಅನುದಾನ ಬೇಕಾಗಬಹುದು
2. ಗೃಹಲಕ್ಷ್ಮೀ : ಪ್ರತಿ ಮನೆಯ ಒಡತಿಗೆ ತಿಂಗಳಿಗೆ 2 ಸಾವಿರ ರುಪಾಯಿ ಅವರ ಅಕೌಂಟಿಗೆ ಹಾಕುತ್ತೇವೆ.
3. ಅನ್ನಭಾಗ್ಯ : ಬಿ.ಪಿ.ಎಲ್. ಕಾರ್ಡುದಾರರಿಗೆ ಪ್ರತಿ ತಿಂಗಳು 10 ಕೆ.ಜಿ.ಉಚಿತ ಅಕ್ಕಿ ನೀಡಲಾಗುವುದು.
4. ಯುವನಿಧಿ : ಈ ವರ್ಷ ಯಾರು ಪದವಿ, ಸ್ನಾತಕೋತ್ತರ ಪದವಿ, ಡಿಪ್ಲಮೋ ಪದವಿದರರಾಗಿ ಉದ್ಯೋಗವಿಲ್ಲದೇ ನಿರುದ್ಯೋಗಿಗಳಾಗುತ್ತಾರೋ ಅಂತಹರ ಖಾತೆಗೆ 2ವರ್ಷದ ವರೆಗೆ ಪ್ರತಿ ತಿಂಗಳು 3 ಸಾವಿರ ರುಪಾಯಿ ಜಮಾ ಮಾಡುತ್ತೇವೆ. ಈ ಅವಧಿಯಲ್ಲಿ ಅವರಿಗೆ ಯಾವುದಾದರೂ ಉದ್ಯೋಗ ದೊರೆತರೆ ಪ್ರೋತ್ಸಾಹ ಧನ ನಿಲ್ಲಿಸುತ್ತೇವೆ.
5. ಮಹಿಳೆಯರಿಗೆ ಉಚಿತ ಬಸ್ ಪಾಸ್ : ರಾಜ್ಯದ ಎಲ್ಲಾ ಮಹಿಳೆಯರಿಗೆ ಸಾಮಾನ್ಯ ಸರ್ಕಾರಿ ಬಸ್ ನಲ್ಲಿ ಸಂಚರಿಸಲು ಉಚಿತ ಪಾಸ್ ನೀಡುತ್ತೇವೆ.
ಈ ಎಲ್ಲಾ ಯೋಜನೆಗಳ ಬಗ್ಗೆ ಮುಂದಿನ ವಾರದ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ, ನಿಯಮಗಳನ್ನು ರೂಪಿಸಿ ಮುಂದಿನ ಸಂಪುಟ ಸಭೆಯ ನಂತರ ತಕ್ಷಣದಿಂದಲೇ ಜಾರಿಗೆ ಬರುವಂತೆ ಜಾರಿಗೆ ತರುತ್ತೇವೆ ಎಂದು ಸಿದ್ದರಾಮಯ್ಯನವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹಾಗೆಯೇ ರಾಜ್ಯದಲ್ಲಿ ನಿಷ್ಕ್ರಿಯವಾಗಿರುವ ಇಂದಿರಾ ಕ್ಯಾಂಟೀನ್ ಗಳನ್ನು ಮತ್ತೆ ಸಕ್ರಿಯಗೊಳಿಸುತ್ತಿದ್ದೇವೆ ಎಂದಿದ್ದಾರೆ.
ಮುಂದಿನ ವಾರ ವಿಧಾನಮಂಡಲದ ಅಧಿವೇಶನ ಕರೆಯುತ್ತಿದ್ದು ಅಲ್ಲಿ ನೂತನ ಸ್ಪೀಕರ್ ಆಯ್ಕೆ ಮತ್ತು ಶಾಸಕರ ಪ್ರಮಾಣವಚನ ಸ್ವೀಕಾರ ನಡೆಸಲಾಗುವುದು ಎಂದಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಂಪುಟದ ನೂತನ 8 ಸಚಿವರುಗಳು ಉಪಸ್ಥಿತರಿದ್ದರು.