ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಮೂರು ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳೇ ಈ ಬಾರಿಯೂ ಆಯಾ ಪಕ್ಷಗಳಿಂದ ಮತ್ತೆ ಎದುರಾಳಿಗಳಾಗಿದ್ದಾರೆ.
ಬಿ.ಜೆ.ಪಿ.ಯಿಂದ ಹಾಲಿ ಶಾಸಕ ಬೆಳ್ಳಿಪ್ರಕಾಶ್ ಅವರು ಮತ್ತೊಮ್ಮೆ ಕಣಕ್ಕಿಳಿದಿದ್ದರೆ, ಕಾಂಗ್ರೇಸ್ ಪಕ್ಷದಿಂದ ಕೆ.ಎಸ್. ಆನಂದ ಅವರು, ಜೆ.ಡಿ.ಎಸ್. ನಿಂದ ವೈ.ಎಸ್.ವಿ. ದತ್ತಾ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಕಳೆದ ಚುನಾವಣೆಯಲ್ಲಿ ಉತ್ತಮ ಅಂತರದಿಂದ ಗೆಲುವು ಪಡೆದಿದ್ದ ಬಿ.ಜೆ.ಪಿ.ಯ ಬೆಳ್ಳಿಪ್ರಕಾಶ್ ಈ ಬಾರಿಯೂ ಗೆಲ್ಲುವ ಫೆವರೇಟ್ ಎಂದೇ ಹೇಳಲಾಗುತ್ತಿದೆ. ಶಾಸಕರಾದ ನಂತರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿ ಜೊತೆಗೆ ಪ್ರತಿಷ್ಟಿತ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿಯೂ ರಾಜ್ಯಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.
ಒಂದು ಹಂತದಲ್ಲಿ ಜೆ.ಡಿ.ಎಸ್ ನಿಂದ ಹೊರನಡೆದಿದ್ದ ವೈ.ಎಸ್.ವಿ. ದತ್ತಾ ಅವರು ಮರಳಿ ಪಕ್ಷಕ್ಕೆ ಬಂದು ಕ್ಷೇತ್ರದಲ್ಲಿ ಜೆ.ಡಿ.ಎಸ್. ಅಭ್ಯರ್ಥಿಯಾಗಿದ್ದಾರೆ. ದಿನದಿಂದ ದಿನಕ್ಕೆ ಕಡೂರು ಕ್ಷೇತ್ರದಲ್ಲಿ ಜೆ.ಡಿ.ಎಸ್. ಅಭ್ಯರ್ಥಿ ದತ್ತಾ ಅವರು ತಮ್ಮ ಹವಾ ಸೃಷ್ಟಿಸುತ್ತಿದ್ದಾರೆ.
ಕಾಂಗ್ರೇಸ್ ಅಭ್ಯರ್ಥಿಯಾಗಿ ಕೆ.ಎಸ್. ಆನಂದ್ರವರು ಮರಳಿ ಟಿಕೆಟ್ ಗಿಟ್ಟಿಸಿದ್ದಾರೆ. ಕೆ. ಎಸ್. ಆನಂದ್ರವರು ಕ್ಷೇತ್ರದಲ್ಲಿ ಸಕ್ರೀಯರಾಗಿದ್ದು, ಜನರ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಾ ಬಂದಿದ್ದಾರೆ. ಒಟ್ಟು ಕಡೂರು ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆಯಲ್ಲಿ ಯಾರಿಗೆ ಅದೃಷ್ಟ ಖುಲಾಯಿಸುತ್ತದೆ ಕಾದು ನೋಡಬೇಕು.