ಈ ಬಾರಿ ಜೆಡಿಎಸ್ಗೆ ರಾಜ್ಯಾಧ್ಯಂತ ಅಭೂತಪೂರ್ವವಾಗಿ ಬೆಂಬಲ ವ್ಯಕ್ತವಾಗಿದ್ದು, ರಾಜ್ಯದಲ್ಲೂ ಜೆಡಿಎಸ್ ಅಧಿಕಾರಕ್ಕೆ ಬರಲು ಅವಕಾಶ ನೀಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ,ದೇವೇಗೌಡ ಮನವಿ ಮಾಡಿದರು.
ಅವರು ಶುಕ್ರವಾರ ಮೂಡಿಗೆರೆ ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ ಅವರ ಪರವಾಗಿ ಮತಯಾಚನೆಗಾಗಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ರಾಜ್ಯದ ಜನರಿಗೆ ಕುಡಿಯುವ ನೀರು ಹಾಗೂ ರೈತರ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸಲು ಕಾವೇರಿಯನ್ನು ಉಳಿಸಿಕೊಳ್ಳಲು ಮನ್ಮೋಹನ್ ಸಿಂಗ್, ವಾಜಪೇಯಿ, ನರೇಂದ್ರ ಮೋದಿ ಯಾರೂ ಬಿಡಲಿಲ್ಲ. ಇಂದಿಗೂ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ. ರಾಜ್ಯದಲ್ಲಿ ರೈತರ ಹಾಗೂ ಜನಸಾಮಾನ್ಯರು ನೆಮ್ಮದಿಯಿಂದ ಬದುಕಲು ಎಚ್.ಡಿ.ಕುಮಾರಸ್ವಾಮಿ ಅವರ ಪಂಚರತ್ನ ಯಾತ್ರೆ ಯೋಜನೆ ಜಾರಿಗೊಳಿಸಲು ಜೆಡಿಎಸ್ ಅಧಿಕಾರಕ್ಕೆ ತರಬೇಕು. ಹಿಂದೆ ಮೂಡಿಗೆರೆಗೆ ಭೇಟಿ ಕೊಟ್ಟಾಗ 3 ಮಂದಿ ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದೀರಿ. ಈಗ ಮೂಡಿಗೆರೆ ಸೇರಿದಂತೆ ಎಲ್ಲಾ ಕ್ಷೇತ್ರದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕೆಂದು ಎಲ್ಲರಲ್ಲೂ ಕೈ ಮುಗಿದು ಕೇಳುತ್ತೇನೆ. ಮೇ.18ಕ್ಕೆ ನನಗೆ 90 ವರ್ಷ ತುಂಬುತ್ತದೆ. ತನ್ನ ಜೀವಿತ ಅವದಿಯಲ್ಲಿ ಪ್ರಾದೇಶಿಕ ಪಕ್ಷ ಉಳಿಯಬೇಕೆಂದು ನನ್ನ ಆಸೆ. ಈ ಆಸೆಯನ್ನು ಈಡೇರಿಸಿಕೊಡಬೇಕೆಂದು ಕೇಳಿಕೊಂಡರು.
ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ನನಗೆ ಜೆಡಿಎಸ್ನಲ್ಲಿ ಟಿಕೇಟ್ ನೀಡಿ ಅಭ್ಯರ್ಥಿ ಮಾಡಿ ತನ್ನ ಬೆಂಬಲಕ್ಕೆ ಮತಯಾಚಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬಂದಿರುವುದು ನನ್ನ ಅದೃಷ್ಟ. ತಾನು ಶಾಸಕನಾಗಿದ್ದಾಗ ಮೂಡಿಗೆರೆ ತಾಲೂಕು ನೆರೆಪೀಡಿತ ಪ್ರದೇಶವಲ್ಲ ಎಂದು ಬಿಜೆಪಿ ಘೋಷಣೆ ಮಾಡಿದಾಗ ಅದನ್ನು ವಿರೋಧಿಸಿದೆ. ಕಾಡಾನೆ ಹಿಡಿಯಲು, ಕಸ್ತೂರಿ ರಂಗನ್, ಬಿಪಿಎಲ್ ರದ್ದು ಬಗ್ಗೆ ಸದನದಲ್ಲಿ ಚರ್ಚೆ ಮಾಡಿ ಸಮಸ್ಯೆ ನಿವಾರಿಸಿದ್ದೇ ತಪ್ಪಾ? ಇಂತಹ ಜನಪರವಾದ ಕೆಲಸ ಎಂಎಲ್ಸಿ ಹಾಗೂ ಎಂಪಿ ಮಾಡಿದ್ದಾರಾ? ನಾನೀಗ ವಿಷ ವರ್ತುಲದಿಂದ ಹೊರಬಂದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮನೆಯಲ್ಲಿ ಧೈರ್ಯವಾಗಿದ್ದೇನೆ. ಬಿಜೆಪಿಯವರಿಗೆ ತಾಕತ್ತಿದ್ದರೆ ಮುಂಬರುವ ತಾ.ಪಂ, ಹಾಗೂ ಜಿ.ಪಂ. ಚುನಾವಣೆ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ ಅವರು, ತನಗೆ ಅಧಿಕಾರ ಸಿಗಲಿ, ಬಿಡಲಿ ಜನಸೇವೆ ನಿರಂತರವಾಗಿ ಮಾಡುತ್ತೇನೆ. ಅದಕ್ಕೆ ಸ್ಪೂರ್ತಿಯೇ ಎಚ್.ಡಿ.ದೇವೇಗೌಡರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಡಿಎಸ್ ಕ್ಷೇತ್ರಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಎಂ.ಎಸ್.ಬಾಲಕೃಷ್ಣ, ಜಿ.ಯು. ಚಂದ್ರೇಗೌಡ, ಅರೆಕುಡಿಗೆ ಶಿವಣ್ಣ, ಸುಮಾ ನಾಗೇಶ್ ಮತ್ತಿತರರಿದ್ದರು.