ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಇಂಜಿನಿಯರ್ ಪದವಿ ಪಡೆದ ಜ್ಞಾನವಂತ, ಸಮಾಜದ ಬಗ್ಗೆ ಕಾಳಜಿ ಹೊಂದಿರುವ ಸರಳ ವ್ಯಕ್ತಿತ್ವದ ದೀಪಕ್ ದೊಡ್ಡಯ್ಯ ಅವರಿಗೆ ಎಲ್ಲಾ ಗ್ರಾಮಗಳಲ್ಲಿ ಅಭೂತಪೂರ್ವವಾಗಿ ಬೆಂಬಲ ವ್ಯಕ್ತವಾಗುತ್ತಿದ್ದು, ಈ ಬಾರಿ ಗೆಲುವು ಖಚಿತ ಎಂದು ತಾ.ಪಂ. ಮಾಜಿ ಅಧ್ಯಕ್ಷ ಕೆ.ಸಿ.ರತನ್ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಂ.ಪಿ.ಕುಮಾರಸ್ವಾಮಿ ಅವರು ಶಾಸಕರಾಗಿದ್ದಾಗ ತಾಲೂಕಿನ ಅನೇಕ ಸಮಸ್ಯೆ ನಿವಾರಣೆ ಮಾಡಲು ಮನವಿ ಮಾಡಿಕೊಂಡಿರೂ ತಲೆ ಕೆಡಿಸಿಕೊಂಡಿರಲಿಲ್ಲ. ಈಗ ಜನಪರ ಕೆಲಸ ಮಾಡುವ ಹೊಸ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಅವರು ಗೆದ್ದ ಬಳಿಕ ಕಳೆದ ಅನೇಕ ವರ್ಷದಿಂದ ನೆನಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿಗಳು, ಕುಡಿಯುವ ನೀರಿನ ಯೋಜನೆ, ಬಡವರಿಗೆ ನಿವೇಶನ ಹಕ್ಕುಪತ್ರ ವಿತರಣೆ, ಮನೆನಿರ್ಮಾಣ, ನೆರೆಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ. ಅಂಬೇಡ್ಕರ್ ಭವನ, ಕನ್ನಡ ಭವನಗಳ ನಿರ್ಮಾಣದ ಮೂಲಕ ಮೂಡಿಗೆರೆ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೆಚ್ಚಿನ ವೇಗ ನೀಡಲಾಗುವುದು.
ತಾಲೂಕು ಆಡಳಿತ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ದೀಪಕ್ ದೊಡ್ಡಯ್ಯನವರು ಗೆದ್ದರೆ ಮೂಡಿಗೆರೆ ಕ್ಷೇತ್ರದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗುವುದು ಎಂದು ಭರವಸೆ ನೀಡಿದರು.
ಎಂ.ಪಿ.ಕುಮಾರಸ್ವಾಮಿ ಅವರು ಬಿಜೆಪಿ ಪಕ್ಷದ ಸಿದ್ದಾಂತಕ್ಕೆ ಬೆಲೆ ಕೊಡುತ್ತಿರಲಿಲ್ಲ. ಕಾರ್ಯಕರ್ತರನ್ನು ಸಂಪೂರ್ಣ ಕಡೆಗಣಿಸಿದ್ದ ಹಿನ್ನಲೆಯಲ್ಲಿ ಹೈಕಮಾಂಡ್ ಅವರಿಗೆ ಟಿಕೇಟ್ ನೀಡಿಲ್ಲ ಹೊರತು ನಮ್ಮ ಒತ್ತಾಯದಿಂದ ಅಲ್ಲ. ಅವರು ಪಕ್ಷ ಬಿಟ್ಟ ಬಳಿಕ ಬಿಜೆಪಿ ಮುಖಂಡರ ಬಗ್ಗೆ ಹಗುರವಾಗಿ ಮಾತನಾಡಿದ್ದು, ತನ್ನಿಂದಲೇ ಎಲ್ಲಾ ಎಂದು ಹೇಳಿಕೊಳ್ಳುತ್ತಿದ್ದರು. ಅವರಿಗೆ ಬಿಜೆಪಿ ಕಾರ್ಯಕರ್ತರು ಚುನಾವಣೆಯಲ್ಲಿಯೇ ತಕ್ಕ ಉತ್ತರ ನೀಡಲು ಸಜ್ಜಾಗಿ ನಿಂತಿದ್ದಾರೆಂದು ಹೇಳಿದರು.
ಬಿಜೆಪಿ ವಕ್ತಾರ ನಯನ ತಳವಾರ, ಮುಖಂಡರಾದ ಪಂಚಾಕ್ಷರಿ, ಪರೀಕ್ಷಿತ್ , ಪ್ರವೀಣ್ ಉಪಸ್ಥಿತರಿದ್ದರು.