ಕಳೆದ 75 ವರ್ಷದಲ್ಲಿ ಮೂಡಿಗೆರೆ ಮೀಸಲು ಕ್ಷೇತ್ರವನ್ನು ಉದ್ದಾರ ಮಾಡದವರು ಮತ್ತೆ ಮಾಡಲು ಸಾಧ್ಯವೇ ಇಲ್ಲವೆಂದು ಜನ ಅರಿತಿದ್ದು, ಸಿಪಿಐ ಅಭ್ಯರ್ಥಿ ರಮೇಶ್ ಕೆಳಗೂರು ಅವರನ್ನು ಬೆಂಬಲಿಸುತ್ತಿದ್ದಾರೆಂದು ಸಿಪಿಐ ಹಿರಿಯ ಮುಖಂಡ ಬಿ.ಕೆ.ಲಕ್ಷ್ಮಣ್ಕುಮಾರ್ ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಅನೇಕ ಮೀಸಲು ಕ್ಷೇತ್ರವಿದೆ. ಆದರೆ ಅಭಿವೃದ್ಧಿಯಲ್ಲಿ ಹಿಂದುಳಿದ ಕ್ಷೇತ್ರವೊಂದಿದ್ದರೆ ಅದು ಮೂಡಿಗೆರೆ ಕ್ಷೇತ್ರ. ಹಾಗಾಗಿ ಜನ ಬದಲಾವಣೆ ಬಯಸುತ್ತಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ಕೆಳಗೂರು ರಮೇಶ್ ಗೆದ್ದರೆ, ಮೊದಲು ಮೂಡಿಗೆರೆ ಹಾಗೂ ಕಳಸ ತಾಲೂಕಿನ ಪ್ರತ್ಯೇಕ ಕಚೇರಿ ಸ್ಥಾಪಿಸಲಾಗುವುದು. ಭ್ರಷ್ಟ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡಿ, ಪ್ರಾಮಾಣಿಕ ಅಧಿಕಾರಿಗಳಿಗೆ ಆದ್ಯತೆ ನೀಡುವ ಜತೆಗೆ ಎಲ್ಲಾ ಕಚೇರಿಯಲ್ಲಿ ದೂರು ಪೆಟ್ಟಿಗೆ ಅಳವಡಿಸಲಾಗುವುದು. ಶಾಸಕರಿಗೆ ಬರುವ ವೇತನದಲ್ಲಿ ಅರ್ಧ ಹಣ ಬಳಸಿ ಸ್ವಾಭಿಮಾನಿ ಮತದಾರರ ವೇದಿಕೆ ಸ್ಥಾಪಿಸಿ ಅದರಲ್ಲಿ ಪತ್ರಕರ್ತರು, ವಕೀಲರು ಹಾಗೂ ಪ್ರಜ್ಞಾವಂತರನ್ನು ಸೇರಿಸಿಕೊಂಡು ಜನ ಸಾಮಾನ್ಯರ ಸಮಸ್ಯೆ ಬಗೆಹರಿಸುವ ಕಾರ್ಯ ನಡೆಸಲಾಗುವುದು ಎಂದು ಹೇಳಿದರು.
ಚುನಾವಣೆಯಲ್ಲಿ ಗೆದ್ದ ಬಳಿಕ ಏನೂ ಇಲ್ಲದವರು ಕೋಟಿ ರೂ ಗಳ ಒಡೆಯರಾಗುತ್ತಿರುವುದು ಜನತೆಗೆ ಗೊತ್ತಿರದ ವಿಚಾರವೇನಲ್ಲ. ಆದರೆ ಈ ಬಾರಿ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಘೋಷಣೆ ಮಾಡಿದ ಆಸ್ತಿಯಂತೆ ಮುಂದೆಯೂ ಹಾಗೆಯೇ ಇರುತ್ತದೆ. ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡ ಎಂಬ ಗಾದೆಯಂತೆ ಜೆಡಿಎಸ್ ಅಭ್ಯರ್ಥಿ ತನ್ನ ನ್ಯೂನ್ಯತೆ ಮುಚ್ಚಿಕೊಳ್ಳಲು ಹೆದರಿ ಯಾವ ಮಾಧ್ಯಮದವರೂ ತಮ್ಮ ವಿರುದ್ಧ ಪ್ರಚಾರ ಮಾಡಬಾರದೆಂದು ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ. ನಿಷ್ಟಾವಂತರಾಗಿದ್ದರೆ ಯಾರೂ ಹೀಗೆ ಮಾಡುತ್ತಿರಲಿಲ್ಲ. ತಾಲೂಕಿನಲ್ಲಿ ಎಲ್ಲಾ ಕಾಮಗಾರಿ ಕಳಪೆಯಾಗಿದೆ. ತಮ್ಮ ಅಭ್ಯರ್ಥಿ ಗೆದ್ದ ಮೇಲೆ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದರು.
ಮೇ5ಕ್ಕೆ ಮೂಡಿಗೆರೆ ನಗರದಲ್ಲಿ ಸಿಪಿಐ ಪಕ್ಷದ ಬೃಹತ್ ರ್ಯಾಲಿ ನಡೆಯಲಿದ್ದು, ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜ ಹಾಗೂ ರಾಜ್ಯದ ನಾಯಕರು ಆಗಮಿಸುತ್ತಿದ್ದಾರೆಂದು ಹೇಳಿದರು.
ಗೋಷ್ಠಿಯಲ್ಲಿ ಸಿಪಿಐ ಮುಖಂಡರಾದ ಓಬಯ್ಯ, ವಿಠಲ್ ಉಪಸ್ಥಿತರಿದ್ದರು.