ಮೂಡಿಗೆರೆ ತಾಲ್ಲೂಕಿನ ಹೆಸಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಳಗುಳ ಗ್ರಾಮದ ಏಳುಮುಖ ಚೌಡೇಶ್ವರಿ ದೇವಸ್ಥಾನದ ಪಕ್ಕದಲ್ಲಿರುವ ಕೆರೆಯಿಂದ ಮಣ್ಣನ್ನು ಪಟ್ಟಣ ಪಂಚಾಯಿತಿ ಸದಸ್ಯರು ಅಕ್ರಮವಾಗಿ ತೆಗೆದು ಸಾಗಾಣಿಕೆ ಮಾಡುತ್ತಿದ್ದಾಗ ಸ್ಥಳೀಯರ ಅಕ್ಷೇಪಣೆ ಮತ್ತು ಪ್ರತಿರೋಧದ ಹಿನ್ನೆಲೆಯಲ್ಲಿ ಅಕ್ರಮವಾಗಿ ಸಾಗಾಣಿಕೆಯನ್ನು ತಡೆ ಹಿಡಿದಿದ್ದಾರೆ.
ಹಿಟಾಚಿ ಯಂತ್ರ ಬಳಸಿ ಐದು ಸಾರಿಗೆ ಟ್ರಾಕ್ಟರ್ ಗಳು ಮತ್ತು ಒಂದು ಕೃಷಿ ಉದ್ದೇಶಕ್ಕಾಗಿ ಬಳಸುತ್ತಿದ್ದ ಟ್ರ್ಯಾಕ್ಟರ್ ನಿಂದ ಅಕ್ರಮವಾಗಿ ಮಣ್ಣು ತೆಗೆಯಲಾಗುತ್ತಿತ್ತು. ಸ್ಥಳೀಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿದರು.
ಅನುಮತಿಯಿಲ್ಲದೆ ಮಣ್ಣು ಸಾಗಿಸುತ್ತಿದ್ದ ಪಟ್ಟಣ ಪಂಚಾಯತ್ ಸದಸ್ಯ ಕೆ. ವೆಂಕಟೇಶ್ ಅವರು ಎರಡು ವರ್ಷಗಳ ಹಿಂದೆ ಇದೇ ರೀತಿ ಮಣ್ಣು ಸಾಗಾಣಿಕೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ ಅಲ್ಲದೆ ನಾನು ಮಣ್ಣು ತೆಗೆದು ಸಾಗಾಣಿಕೆ ಮಾಡಿದ್ದಕ್ಕೆ ಯಾರು ಅನಾಮಧೇಯರು ಕೆರೆ ಹೂಳೆತ್ತಿದ್ದೆಂದು 10 ಲಕ್ಷ ರೂಪಾಯಿ ಬಿಲ್ ಗ್ರಾಮಪಂಚಾಯಿತಿಯಿಂದ ಮಾಡಿಸಿಕೊಂಡಿದ್ದಾರೆಂದು ಆರೋಪಿಸಿದ್ದಾರೆ.
ಒಟ್ಟಾರೆ ಅಧಿಕಾರಿಗಳ ನಿರ್ಲಕ್ಷತನ ಮತ್ತು ಬೇಜಾಬ್ದಾರಿಯಿಂದ ಕೆರೆಯು ಒತ್ತುವರಿಯಾಗಿದ್ದು ಜೊತೆಗೆ ಕೆರೆಯಿಂದ ಯಾವುದೇ ಅನುಮತಿ ಇಲ್ಲದೇ ಮಣ್ಣನ್ನು ಸಾಗಿಸಲಾಗುತ್ತಿದೆ.
ಕೆರೆ ಒತ್ತುವರಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿದ ಗ್ರಾಮಸ್ಥರು. ಸದರಿ ಕೆರೆಯು ಸರ್ಕಾರಿ ಕೆರೆಯಾಗಿದ್ದು ಈಗಾಗಲೇ ಕೆಲವು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದು ಕೂಡಲೆ ಕೆರೆ ಒತ್ತುವರಿಯನು ತೆರವುಗೊಳಿಸುವಂತೆ ಮತ್ತು ಅತಿಕ್ರಮವಾಗಿ ಕೆರೆಯ ಮಣ್ಣನ್ನು ಎತ್ತಲು ರಾಜಕಾರಣಿಗೆ ಸಹಕಾರ ನೀಡಿದ ಹಿಟಾಚಿ ಚಾಲಕನ ಮೇಲೆ ಕ್ರಮ ಜರುಗಿಸುವಂತೆ ಹಾಗೂ ಮಣ್ಣು ತುಂಬಲು ತಂದಿದ್ದ ಐದು ಟ್ರಾಕ್ಟರ್ ಹಾಗೂ ಜೆಸಿಬಿಯನ್ನು ವಶಪಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ.