ಮೂಡಿಗೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ ಅವರು ತನ್ನ ವಿರುದ್ಧ ಮಾಧ್ಯಮಗಳಲ್ಲಿ ಮಾನಹಾನಿ ಹಾಗೂ ನಕಾರಾತ್ಮಕ ಸುದ್ದಿ ಪ್ರಕಟಿಸದಂತೆ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದ ಹಿನ್ನಲೆಯಲ್ಲ್ದಿ ಮುಂದಿನ ವಿಚಾರಣೆವರೆಗೆ ಮಾಧ್ಯಮದಲ್ಲಿ ಎಂ.ಪಿ.ಕುಮಾರಸ್ವಾಮಿ ಅವರ ವಿರುದ್ಧ ಮಾನಹಾನಿಕರ ಸುದ್ದಿ ಬಿತ್ತರಿಸದಂತೆ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ.
ಜೆಡಿಎಸ್ ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ ಅವರು ತನ್ನ ವಿರುದ್ಧ ಮಾನಹಾನಿಯಾಗುವಂತಹ ಸುದ್ದಿ ಬಿತ್ತರಿಸಬಾರದೆಂದು ದೃಶ್ಯ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮ ಸೇರಿದಂತೆ ಒಟ್ಟು 51 ಮಾಧ್ಯಮಗಳ ಹೆಸರನ್ನು ನ್ಯಾಯಾಲಯಕ್ಕೆ ನೀಡುವ ಮೂಲಕ ಬೆಂಗಳೂರು ನಗರ ಸಿಟಿ ಸಿವಿಲ್ ಮತ್ತು ಸೆಷನ್ ನ್ಯಾಯಾಲಯದ ಮೊರೆ ಹೋಗಿದ್ದರು.
ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲದೇ, ಫೇಸ್ ಬುಕ್, ಟ್ವೀಟರ್, ವಾಟ್ಸಾಪ್, ಗೂಗಲ್, ಯೂಟೂಬ್ ಮುಂತಾದ ಸಾಮಾಜಿಕ ಮಾಧ್ಯಮಗಳ ಮೇಲೂ ತಮ್ಮ ವಿರುದ್ಧ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ಕುಮಾರಸ್ವಾಮಿ ತಡೆಯಾಜ್ಞೆ ತಂದಿದ್ದಾರೆ.
ಅದರಂತೆ ಎಂ.ಪಿ.ಕುಮಾರಸ್ವಾಮಿ ಅವರ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿ ಅರ್ಜಿದಾರರು ಮನವಿ ಮಾಡಿದಂತೆ 51 ದೃಶ್ಯ, ಮುದ್ರಣ, ಸಾಮಾಜಿಕ ಮಾಧ್ಯಮಗಳಲ್ಲಿ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಮಾನ ಹಾನಿ ಹಾಗೂ ನಕಾರಾತ್ಮಕ ಸುದ್ದಿಗಳನ್ನು ಬಿತ್ತರಿಸದಂತೆ ಮುಂದಿನ ವಿಚಾರಣೆವರೆಗೂ ಚಾಲ್ತಿಯಲ್ಲಿರುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.
ಎಂ.ಪಿ. ಕುಮಾರಸ್ವಾಮಿಯವರು ಮೂಡಿಗೆರೆ ಕ್ಷೇತ್ರದಲ್ಲಿ ಬಿ.ಜೆ.ಪಿ.ಯಿಂದ ಟಿಕೆಟ್ ವಂಚಿತರಾಗಿ ಜೆ.ಡಿ.ಎಸ್. ಪಕ್ಷವನ್ನು ಸೇರಿ ಈಗ ಜೆ.ಡಿ.ಎಸ್. ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ವಿವಿಧ ಕಾರಣಗಳಿಂದ ಸದಾ ರಾಜ್ಯದ ಮಾಧ್ಯಮ ವಲಯದಲ್ಲಿ ಸುದ್ದಿಗೆ ಗ್ರಾಸವಾಗುತ್ತಿದ್ದ ಎಂ.ಪಿ.ಕುಮಾರಸ್ವಾಮಿಯವರು ಇದೀಗ ಚುನಾವಣೆ ಸಂದರ್ಭದಲ್ಲಿ ತನ್ನ ಮೇಲೆ ಯಾವುದೇ ಮಾನಹಾನಿಕರ ಸುದ್ದಿ ಪ್ರಸಾರವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.