ಮಾಜಿ ಸಚಿವರಾದ ಬಿ.ಬಿ.ನಿಂಗಯ್ಯ ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಜೆ.ಡಿ.ಎಸ್. ಅಭ್ಯರ್ಥಿ ಎಂದು ಘೋಷಣೆ ಮಾಡಲ್ಪಟ್ಟು ಕೊನೆಯ ಕ್ಷಣದಲ್ಲಿ ಪಕ್ಷದ ಟಿಕೆಟ್ ವಂಚಿತರಾದ ಬಿ.ಬಿ.ನಿಂಗಯ್ಯ ಇದೀಗ ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದಾರೆ. ಪಕ್ಷದ ಮುಖಂಡರ ಮನವೊಲಿಕೆಗೆ ಜಗ್ಗದೇ ನಿನ್ನೆ ಮೂಡಿಗೆರೆ ಮೀಸಲು ಕ್ಷೇತ್ರದಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಮೂಡಿಗೆರೆ ಕ್ಷೇತ್ರದಲ್ಲಿ ಶಾಸಕ ಎಂ.ಪಿ. ಕುಮಾರಸ್ವಾಮಿಯವರು ಬಿ.ಜೆ.ಪಿ. ತೊರೆದು ಜೆ.ಡಿ.ಎಸ್. ಸೇರ್ಪಡೆಯಾಗಿದ್ದು ಇದೀಗ ಅವರನ್ನು ಜೆ.ಡಿ.ಎಸ್. ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.
ಪಕ್ಷದ ಟಿಕೆಟ್ ಕೈತಪ್ಪಿದ್ದರಿಂದ ಬಿ.ಬಿ.ನಿಂಗಯ್ಯ ಮತ್ತು ಅವರ ಬೆಂಬಲಿಗರು ವರಿಷ್ಠರ ವಿರುದ್ಧ ಮುನಿಸಿಕೊಂಡಿದ್ದು ಯಾವುದೇ ರಾಜೀ ಸಂಧಾನಕ್ಕೆ ಜಗ್ಗದೇ ಚುನಾವಣೆ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ಇದರಿಂದಾಗಿ ಕ್ಷೇತ್ರದಲ್ಲಿ ಜೆ.ಡಿ.ಎಸ್. ಗೆ ಬಂಡಾಯದ ಬಿಸಿ ತಾಗಿದೆ. ಎಂ.ಪಿ.ಕುಮಾರಸ್ವಾಮಿಯವರ ಸೇರ್ಪಡೆಯಿಂದ ಹುಮ್ಮಸ್ಸಿನಲ್ಲಿರುವ ಜೆ.ಡಿ.ಎಸ್. ಮುಖಂಡರು ಮತ್ತು ಕಾರ್ಯಕರ್ತರಿಗೆ ಇದೀಗ ನಿಂಗಯ್ಯನವರು ಮುನಿಸಿಕೊಂಡಿರುವುದು ತಲೆನೋವು ತಂದಿದೆ. ನಿಂಗಯ್ಯನವರು ಪಕ್ಷೇತರರಾಗಿ ಸ್ಪರ್ಧಿಸಿದರೆ ಅವರ ಕಟ್ಟಾ ಬೆಂಬಲಿಗರು ಮತ್ತು ಅನುಯಾಯಿಗಳ ಒಂದಷ್ಟು ಮತಗಳು ಜೆ.ಡಿ.ಎಸ್.ನಿಂದ ವಿಭಜನೆಯಾಗುವ ಸಾಧ್ಯತೆಯಿದ್ದು, ಜಿದ್ದಾಜಿದ್ದಿನ ಸ್ಪರ್ಧೆಯಿರುವ ಮೂಡಿಗೆರೆಯಲ್ಲಿ ನಿಂಗಯ್ಯನವರು ಪಡೆಯುವ ಮತಗಳು ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.