ಬಿಜೆಪಿಯ ಜನವಿರೋಧಿ ನೀತಿಯಿಂದಾಗಿ ಜನರು ಬೇಸತ್ತು ಹೋಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 50 ಸ್ಥಾನ ಪಡೆಯುವುದೇ ಕಷ್ಟ, ಈ ಬಾರಿ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರ ಹಿಡಿಯುವುದು ಶತಸಿದ್ಧ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
ಅವರು ಮಂಗಳವಾರ ತಮ್ಮ ಪುತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ಅವರು ಸಾವಿರಾರು ಕಾರ್ಯಕರ್ತರೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಚುನಾವಣಾಧಿಕಾರಿಗಳಿಗೆ ಅಧಿಕೃತ ನಾಮಪತ್ರ ಸಲ್ಲಿಸಿದ ಬಳಿಕ ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದರು.
ಬಿಜೆಪಿ ಅಚ್ಚೇ ದಿನ್ ತರುತ್ತೇವೆಂದು ಸುಳ್ಳು ಹೇಳಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಡೀಸೆಲ್, ಪೆಟ್ರೋಲ್, ಗ್ಯಾಸ್ ಸೇರಿದಂತೆ ಆಹಾರ ಪದಾರ್ಥಗಳೆಲ್ಲವೂ ಜಿಎಸ್ಟಿಗೆ ಸಿಲುಕಿಸಿ, ಜನರ ಕತ್ತು ಹಿಸುಕುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ನೆಮ್ಮದಿಯಾಗಿ ಜೀವನ ನಡೆಸುತ್ತಿರುವ ಬಗ್ಗೆ ಜನರು ನೆನಪು ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಬಿಜೆಪಿ ಏನೇ ಕುತಂತ್ರ ನಡೆಸಿದರೂ ನಡೆಯುವುದಿಲ್ಲ. ಜನ ತಕ್ಕ ಪಾಠ ಕಲಿಸಲು ಸಿದ್ದವಾಗಿ ನಿಂತಿದ್ದಾರೆಂದು ಹೇಳಿದರು.
ಮಾಜಿ ಎಂಎಲ್ಸಿ ಗಾಯಿತ್ರಿ ಶಾಂತೇಗೌಡ ಮಾತನಾಡಿ, ಈಗಾಗಲೇ ಬಿಜೆಪಿ ಅವರ ಶೇ.40 ಭ್ರಷ್ಟಾಚಾರ ಜಗತ್ ಜಾಹೀರಾಗಿದೆ. ಜನ ಸಾಮಾನ್ಯರ ಬದುಕಿನ ಬಗ್ಗೆ ಕಿಂಚಿತ್ತೂ ಚಿಂತನೆಯಿಲ್ಲ. ಈ ದೇಶದ ಬೆನ್ನೆಲುಬು ಆಗಿರುವ ರೈತರು ಸಂಕಷ್ಟಕ್ಕೆ ನಿವಾರಿಸುವಲ್ಲಿ ವಿಫಲವಾಗಿದೆ. ಇನ್ನು ಜೆಡಿಎಸ್ನವರು ಬಿಜೆಪಿ ಮತ್ತು ಕಾಂಗ್ರೆಸ್ನಿಂದ ಹೊರ ಬಂದವರಿಗೆ ಮಣೆ ಹಾಕುತ್ತಾ ಬೇಳೆ ಬೇಯಿಸಿಕೊಳ್ಳುತ್ತಿದೆ. ಜನರಿಗೆ ಕಾಂಗ್ರೆಸ್ ಬಿಟ್ಟರೆ ಬೇರೆ ಯಾವ ಆಡಳಿತದಿಂದಲೂ ನೆಮ್ಮದಿ ಸಿಗುವುದಿಲ್ಲವೆಂಬುದು ಅರ್ಥವಾಗಿದೆ. ಹಾಗಾಗಿ ಕಾಂಗ್ರೆಸ್ ರಾಜ್ಯದಲ್ಲಿ ಬಹುಮತ ಪಡೆಯುವುದು ಶತ ಸಿದ್ದ ಎಂದು ಹೇಳಿದರು.
ಅಭ್ಯರ್ಥಿ ನಯನಾ ಮೋಟಮ್ಮ ಮಾತನಾಡಿ, ತನ್ನ ತಾಯಿ ಕ್ಷೇತ್ರದಲ್ಲಿ ಜನಪರ ಕೆಲಸ ಮಾಡಿರುವುದು ಅರ್ಧಕ್ಕೆ ನಿಲ್ಲಬಾರದು. ಅದನ್ನು ತಾನು ಮುಂದುವರೆಸುತ್ತೇನೆ. ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದ ನೀಡದೇ ಜನರ ಸಂಕಷ್ಟ ನಿವಾರಿಸುವುದೇ ತನ್ನ ದ್ಯೇಯವಾಗಿದೆ. ಹಾಗಾಗಿ ತನಗೊಂದು ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ಕಾಂಗ್ರೇಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಮಾಜಿ ಜಿಲ್ಲಾಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಹೆಚ್.ಹೆಚ್. ದೇವರಾಜು, ಕೆ.ಆರ್. ಪ್ರಭಾಕರ್, ಬಿ.ಎಂ.ಸಂದೀಪ್ ಸೇರಿದಂತೆ ಅನೇಕ ಹಿರಿಯ ಮುಖಂಡರು, ಕಾಂಗ್ರೇಸ್ ವಿವಿಧ ಬ್ಲಾಕ್ ಮತ್ತು ಹೋಬಳಿ ಅಧ್ಯಕ್ಷರುಗಳು, ಪಕ್ಷದ ವಿವಿಧ ವಿಭಾಗಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.