ಗೆಲ್ಲುವ ಅಭ್ಯರ್ಥಿಯನ್ನು ಬಿಟ್ಟು ಕ್ಷುಲ್ಲಕ ಕಾರಣಕ್ಕೆ ಎಂ.ಪಿ.ಕುಮಾರಸ್ವಾಮಿ ಅವರಿಗೆ ಟಿಕೇಟ್ ತಪ್ಪಿಸಿದ್ದರಿಂದ ಈ ಬಾರಿ ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿಗೆ ಹೀನಾಯ ಸೋಲು ಎದುರಾಗಲಿದೆ. ಎಂ.ಪಿ. ಕುಮಾರಸ್ವಾಮಿಯವರನ್ನು ಬೆಂಬಲಿಸಿ ಬಿ.ಜೆ.ಪಿ. ಪಕ್ಷಕ್ಕೆ ರಾಜೀನಾಮೆ ನೀಡಿ ಜೆ.ಡಿ.ಎಸ್. ಪಕ್ಷ ಸೇರುತ್ತಿರುವುದಾಗಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರೇಕುಡಿಗೆ ಶಿವಣ್ಣ ಹೇಳಿದ್ದಾರೆ.
ಅವರು ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಜನತೆಗೆ ಅತಿವೃಷ್ಠಿ ಪರಿಹಾರ ಕೊಡಿಸಲು ಬೆಂಗಳೂರು ಗಾಂಧಿ ಪ್ರತಿಮೆ ಎದುರು ನಡೆಸಿದ ಧರಣಿಯಿಂದ ಪಕ್ಷಕ್ಕೆ ಮುಜುಗರ ತಂದಿದ್ದಾರೆಂಬ ಒಂದೇ ಕಾರಣಕ್ಕೆ ಎಂಪಿಕೆಗೆ ಟಿಕೇಟ್ ತಪ್ಪಿಸಿದ್ದಾರೆ. ಅದರ ಪರಿಣಾಮ ಈ ಬಾರಿ ಬಿಜೆಪಿ ಎದುರಿಸುತ್ತದೆ. ಎಂಪಿಕೆ ಅವರು ಎಂಎಲ್ಸಿ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆಂಬ ಆರೋಪ ಎದುರಿಸುತ್ತಿದ್ದಾರೆ. ಅದು ನಿಜವೇ ಆಗಿದ್ದರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ. ಎಂಎಲ್ಸಿ ಅವರು ಸರಕಾರದಿಂದ ಎಷ್ಟು ಹಣ ತಂದಿದ್ದಾರೆ? ಅವರ ಅನುದಾನದಲ್ಲಿ ಎಷ್ಟು ಕೆಲಸವಾಗಿದೆ ಎಂಬುದು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಎಂ.ಪಿ.ಕುಮಾರಸ್ವಾಮಿ ಅವದಿಯಲ್ಲಿ ಹೆಚ್ಚು ಅನುದಾನ ತಂದು ಅಧಿಕ ಕೆಲಸ ಮಾಡಿದ್ದಾರೆ. ಸರಕಾರದ ವಿರುದ್ಧವೇ ಹೋರಾಟ ಮಾಡಿ ಎನ್ಡಿಆರ್ಎಫ್ ಅನುದಾನ ತಂದಿದ್ದಾರೆ. ಬಿಪಿಎಲ್ ಕಾರ್ಡ್ ಸ್ಥಗಿತಗೊಳಿಸಿದ್ದಾಗ ಸದನದಲ್ಲಿ ಚರ್ಚೆ ನಡೆಸಿ ಬಿಪಿಎಲ್ ದಾರರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ. ಅವರ ಜನಪರ ಕಾಳಜಿಯಿಂದಲೇ ಕ್ಷೇತ್ರದ ಜನ ಅವರನ್ನು ಜನಪ್ರಿಯ ಶಾಸಕರೆಂದು ಹೆಸರಿಟ್ಟಿದ್ದಾರೆ. ಈ ಬಾರಿ ಎಂಪಿಕೆ ಗೆಲುವಿಗೆ ಯಾವ ತಂತ್ರವೂ ನಡೆಯುವುದಿಲ್ಲ ಎಂದು ಹೇಳಿದರು.
ದೊಡ್ಡ ಸಂಖ್ಯೆಯ ಬಿ.ಜೆ.ಪಿ.ಕಾರ್ಯಕರ್ತರು ನಮ್ಮೊಂದಿಗೆ ಬಿ.ಜೆ.ಪಿ.ಗೆ ಸೇರ್ಪಡೆಯಾಗುತ್ತಿದ್ದಾರೆ. ಕ್ಷೇತ್ರದಲ್ಲಿ ಎಂ.ಪಿ.ಕುಮಾರಸ್ವಾಮಿ ಗೆಲುವಿಗೆ ಸರ್ವ ರೀತಿಯಲ್ಲಿಯೂ ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಹೆಚ್.ಜೆ. ಸಂದರ್ಶ, ಗಿರೀಶ್ ಹೆಸಗಲ್, ಹಂಝಾ ಉಪಸ್ಥಿತರಿದ್ದರು.