ಸಕಲೇಶಪುರ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಅವರ ಬಂದೂಕು ಪರವಾನಗಿ ರದ್ದು ಆದೇಶವನ್ನು ಹಿಂಪಡೆದು ಬಂದೂಕನ್ನು ಹಿಂತಿರುಗಿಸದಿದ್ದರೆ ಈ ಬಾರಿಯ ವಿಧಾನಸಭಾ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿ ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್) ಹೇಳಿದೆ. ಹಾಸನ ಜಿಲ್ಲೆಯ ಸಕಲೇಶಪುರ ಉಪವಿಭಾಗಾಧಿಕಾರಿಗೆ ಸಂಘಟನೆಯ ಮುಖಂಡರು ಮನವಿ ಪತ್ರ ಸಲ್ಲಿಸಿದ್ದಾರೆ.
“ಎಚ್.ಎಂ ವಿಶ್ವನಾಥ್ ಮಲೆನಾಡು ಭಾಗದ ಕಾಡಾನೆ ಸಮಸ್ಯೆ ಬಗ್ಗೆ ಅವರು ಸತತವಾಗಿ ಸರ್ಕಾರ ಮತ್ತು ಅರಣ್ಯ ಇಲಾಖೆಯ ಗಮನಸೆಳೆಯುತ್ತಲೇ ಬಂದಿದ್ದಾರೆ”
“ಮಲೆನಾಡು ಭಾಗದಲ್ಲಿ ಕಾಡಾನೆ ಮತ್ತು ಇತರೆ ಕಾಡುಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾಡಾನೆ ದಾಳಿಗೆ ಈವರೆಗೆ 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅಪಾರ ಪ್ರಮಾಣದಲ್ಲಿ ಬೆಳೆಹಾನಿ ಉಂಟಾಗುತ್ತಲೇ ಇದೆ”
“ಮಲೆನಾಡು ಭಾಗದಲ್ಲಿ ಕಾಡಾನೆಗಳ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ಅಂದಾಜು 80 ರಿಂದ 90 ಕಾಡಾನೆಗಳು ಬೀಡು ಬಿಟ್ಟಿವೆ. ಕಾಡಾನೆದಾಳಿಯಿಂದ ಬೇಸತ್ತು ಹೋರಾಟ ತೀವ್ರಗೊಂಡ ಬಳಿಕ ಸರ್ಕಾರ ನೇಮಿದ್ದ ಸಮಿತಿಯ ಸಕಲೇಶಪುರಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಭೆಯಲ್ಲಿ ಕಾಡಾನೆಗಳ ಹಾವಳಿಯಿಂದ ಬೇಸತ್ತು ಭಾವನಾತ್ಮಕವಾಗಿ ಮಾತನಾಡುವ ವೇಳೆ “ನನ್ನ ತೋಟದಲ್ಲಿ ಕಾಡಾನೆಗಳಿದ್ದು, ನನ್ನ ಮೇಲೆ ದಾಳಿಗೆ ಮುಂದಾದರೆ ಆತ್ಮ ರಕ್ಷಣೆಗಾಗಿ ಗುಂಡು ಹೊಡೆಯುತ್ತೇನೆ” ಎಂದು ಹೇಳಿದ್ದರು. ಬಳಿಕ ಬಂದೂಕು ಲೈಸೆನ್ಸ್ ರದ್ಧು ಮಾಡಿ ಬಂದೂಕನ್ನು ಠೇವಣಿ ಇರಿಸಿಕೊಳ್ಳಲಾಗಿತ್ತು” ಎಂದು ವಿವರಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮೌಖಿಕವಾಗಿ ಸೂಚನೆ ನೀಡಿದ್ದರೂ ಮಾಜಿ ಶಾಸಕ ಎಚ್ ಎಂ ವಿಶ್ವನಾಥ್ ಅವರ ಲೈಸೆನ್ಸ್ ಮತ್ತು ಬಂದೂಕನ್ನು ಅಮಾನತು ಮಾಡಿರುವುದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಷಯವು ಬೆಳೆಗಾರರ ಭಾವನೆಗಳಿಗೆ ಧಕ್ಕೆಯುಂಟುಮಾಡುತ್ತಿದ್ದು, ತಕ್ಷಣವೇ ಆದೇಶವನ್ನು ಹಿಂಪಡೆದು ಪಡೆದು ಸಾರ್ವಜನಿಕವಾಗಿ ಮಲೆನಾಡಿನಲ್ಲಿ ಶಾಂತಿಯಿಂದ ಬದುಕಲು ಅವರ ಲೈಸೆನ್ಸ್ ಮತ್ತು ಬಂದೂಕನ್ನು ವಾಪಾಸ್ ನೀಡಬೇಕೆಂದು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಒತ್ತಾಯಿಸುತ್ತದೆ” ಎಂದು ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಕೆ.ಜಿ.ಎಫ್ (ಕರ್ನಾಟಕ ಬೆಳೆಗಾರರ ಒಕ್ಕೂಟ)ದ ಅಧ್ಯಕ್ಷ ಮೋಹನ್ ಕುಮಾರ್, ಕಾರ್ಯದರ್ಶಿ ಕೃಷ್ಣಪ್ಪ, ಕಸಬಾ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಲೋಹಿತ್ ಕೌಡಹಳ್ಳಿ, ಎಚ್.ಡಿ.ಪಿ.ಎ ಕಾರ್ಯದರ್ಶಿ ಎಂ ಬಿ ರಾಜೀವ್, ಕಾಫಿ ಬೆಳೆಗಾರರದ ಬಿರಡಹಳ್ಳಿ ಮದನ್, ಹಾನುಬಾಳ್ ಚೇತನ್, ಹಲಸುಲಿಗೆ ರಮೇಶ್ ಹಾಗೂ ಇತರು ಇದ್ದರು