ಕಾಂಗ್ರೇಸ್ ಪಕ್ಷ ತನ್ನ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದೆ. ನಾಲ್ಕನೇ ಪಟ್ಟಿಯಲ್ಲಿ 7 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಬಹು ಕುತೂಹಲ ಕೆರಳಿಸಿದ್ದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಹೆಚ್.ಡಿ.ತಮ್ಮಯ್ಯ ಅವರ ಪಾಲಾಗಿದೆ.
ಚಿಕ್ಕಮಗಳೂರು ಟಿಕೆಟ್ ಗೆ ನಾಲ್ಕೈದು ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ ಕಾಂಗ್ರೇಸ್ ಇದೀಗ ಹೆಚ್.ಡಿ.ತಮ್ಮಯ್ಯ ಅವರಿಗೆ ಟಿಕೆಟ್ ನೀಡಿದೆ.
ಹೆಚ್.ಡಿ.ತಮ್ಮಯ್ಯ ಇತ್ತೀಚೆಗಷ್ಟೇ ಬಿ.ಜೆ.ಪಿ.ತೊರೆದು ಕಾಂಗ್ರೇಸ್ ಸೇರಿದರು. ಪಕ್ಷಕ್ಕೆ ಸೇರಿ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದರು. ಆದರೆ ತಮ್ಮಯ್ಯ ಅವರಿಗೆ ಟಿಕೆಟ್ ನೀಡಬಾರದು ಎಂದು ಇತರೆ ಆಕಾಂಕ್ಷಿಗಳು ಒತ್ತಾಯಿಸಿದ್ದರು.
ಆದರೆ ಇತ್ತೀಚೆಗೆ ಪಕ್ಷಕ್ಕೆ ಸೇರಿದ್ದರೂ ಸಹ ತಮ್ಮಯ್ಯ ಅವರಿಗೆ ಟಿಕೆಟ್ ನೀಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಇದಕ್ಕೆ ಕ್ಷೇತ್ರದ ಮೂಲ ಕಾಂಗ್ರೇಸಿಗರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ಚಿಕ್ಕಮಗಳೂರು ನಗರಸಭೆ ಮಾಜಿ ಅಧ್ಯಕ್ಷರಾಗಿದ್ದ ತಮ್ಮಯ್ಯ ಈ ಹಿಂದೆ ಕಾಂಗ್ರೇಸ್ ಮತ್ತು ಜೆ.ಡಿ.ಎಸ್ ಪಕ್ಷದಲ್ಲಿದ್ದು ನಂತರ ಬಿ.ಜೆ.ಪಿ.ಸೇರಿದ್ದರು.
ಬಿ.ಜೆ.ಪಿ ಯಲ್ಲಿ ಸಕ್ರಿಯರಾಗಿ ಶಾಸಕ ಸಿ.ಟಿ.ರವಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಈಗ್ಗೆ ಮೂರು ತಿಂಗಳ ಹಿಂದೆ ಅವರು ಬಿ.ಜೆ.ಪಿ.ತೊರೆದು ಕಾಂಗ್ರೇಸ್ ಸೇರಿದ್ದರು.
ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಲಿಂಗಾಯತ ಸಮುದಾಯಕ್ಕೆ ಸೇರಿರುವ ತಮ್ಮಯ್ಯ ಅವರನ್ನು ಸಿ.ಟಿ.ರವಿ.ಯವರ ವಿರುದ್ಧ ಕಾಂಗ್ರೇಸ್ ಕಣಕ್ಕಿಳಿಸಿದೆ. ಈ ನಡೆಯ ಹಿಂದೆ ಯಾವ ತಂತ್ರಗಾರಿಕೆ ಇದೆ ಎಂಬುದನ್ನು ಕಾದು ನೋಡಬೇಕು.