ತರೀಕೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೇಸ್ ಟಿಕೆಟ್ ಕೈತಪ್ಪಿದ್ದರಿಂದ ಮನನೊಂದಿರುವ ಗೋಪಿಕೃಷ್ಣಾ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ.
ನಿನ್ನೆ ಅಜ್ಜಂಪುರ ತಾಲ್ಲೂಕಿನ ಗಡಿಹಳ್ಳಿಯಲ್ಲಿರುವ ಮಾಜಿ ಶಾಸಕ ಎಸ್.ಎಂ. ನಾಗರಾಜು ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಮಾಜಿ ಶಾಸಕ ಹೆಚ್.ಟಿ. ಶಿವಶಂಕರಪ್ಪ, ಗೋಪಿಕೃಷ್ಣ ಸೇರಿದಂತೆ 10 ಮಂದಿ ಟಿಕೆಟ್ ಆಕಾಂಕ್ಷಿಗಳು ಸೇರಿದ್ದರು. ಆಕಾಂಕ್ಷಿಗಳೆಲ್ಲರು ಒಮ್ಮತದಿಂದ ಗೋಪಿಕೃಷ್ಣ ಅವರನ್ನು ಕಾಂಗ್ರೇಸ್ ವಿರುದ್ಧ ಬಂಡಾಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಸರ್ವಾನುಮತದಿಂದ ತೀರ್ಮಾನ ಕೈಗೊಂಡಿದ್ದಾರೆ.
ತರೀಕೆರೆ ಕ್ಷೇತ್ರದಲ್ಲಿ ಗೋಪಿಕೃಷ್ಣ ಕಾಂಗ್ರೇಸ್ ಟಿಕೆಟ್ ಗೆ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಅಲ್ಲಿ ಮಾಜಿ ಶಾಸಕ ಜಿ.ಹೆಚ್. ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಗೋಪಿಕೃಷ್ಣ ಬಂಡಾಯವೆದ್ದಿದ್ದು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನನಗೆ ಟಿಕೆಟ್ ನೀಡುತ್ತೇನೆ ಎಂದು ಭರವಸೆ ನೀಡಿ ಈಗ ಮೋಸ ಮಾಡಿದ್ದಾರೆ. ಕಾಂಗ್ರೇಸ್ ನಾಯಕ ಬೈರತಿ ಸುರೇಶ್ ಅವರ ಕುತಂತ್ರದಿಂದಾಗಿ ನನಗೆ ಟಿಕೆಟ್ ಕೈತಪ್ಪಲು ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ 2 ಕೋಟಿ ಹಣ ನೀಡಿದ್ದೇನೆ ,ಮೂರು ತಿಂಗಳ ಹಿಂದಷ್ಟೆ ವರುಣಾ ಕ್ಷೇತ್ರದಲ್ಲಿ ಮತ್ತೊಂದು ಕಾರ್ಯಕ್ರಮ ಮಾಡಿದ್ದು 20 ಲಕ್ಷ ಖರ್ಚು ಮಾಡಿ ವರುಣಾದಲ್ಲಿ ಕಾರ್ಯಕ್ರಮ ಮಾಡಿದ್ದೆ ಎಂದು ಆಕ್ರೋಶ ಹೊರಹಾಕಿದರು
ನಿಮ್ಮ ಊರಿಗೆ ಬಂದು ಅಲ್ಲೆ ನಿಂತು ನಿನಗೆ ಟಿಕೆಟ್ ಘೋಷಣೆ ಮಾಡ್ತೀನಿ ಅಂದಿದ್ರು ಸಿದ್ದರಾಮಯ್ಯ, ಆಮೇಲೆ ಟಿಕೆಟ್ ಕೇಳಿದ್ದಕ್ಕೆ ಹೇ… ಸುಮ್ನೆ ನಡಿಯಪ್ಪಾ ನೀನು ಅಂದ್ರು..ಸಿದ್ದು ಮಾತನ್ನ ನೆನೆದು ಸಭೆಯಲ್ಲಿ ಕಣ್ಣೀರಿಟ್ಟರು. ರಾಜಕೀಯ ಪಕ್ಷಗಳು ನನ್ನನ್ನು ಕಡೆಗಣಿಸಿದ್ದರೂ, ನನ್ನ ಕ್ಷೇತ್ರದ ಜನತೆ ನನ್ನನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ.ಅವರೆಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ ಎಂದರು. ಅದೇ ವೇಳೆ ಇದೇ ತಿಂಗಳು 20 ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.
ತರೀಕೆರೆ ಭಾಗದಲ್ಲಿ ಅತ್ಯಂತ ಜನಪ್ರಿಯರಾಗಿರುವ ಮತ್ತು ಸಮಾಜಸೇವೆಯಿಂದ ಜನರ ಪ್ರೀತಿ ಗಳಿಸಿರುವ ಗೋಪಿಕೃಷ್ಣ ಅವರ ಬಂಡಾಯದಿಂದಾಗಿ ಕ್ಷೇತ್ರದಲ್ಲಿ ಕಾಂಗ್ರೇಸ್ಸಿಗೆ ಮತವಿಭಜನೆಯ ಭೀತಿ ಆವರಿಸಿದೆ. ಗೋಪಿಕೃಷ್ಣ ಅವರನ್ನು ಸಮಾಧಾನಪಡಿಸಲು ಹೈಕಮಾಂಡ್ ಯಾವುದಾದರೂ ತಂತ್ರ ಹೂಡುತ್ತದೆಯೋ ಕಾದು ನೋಡಬೇಕು.