ಜಾತ್ಯಾತೀತ ಜನತಾ ದಳ (ಜೆ.ಡಿ.ಎಸ್.) ಪಕ್ಷವು ವಿಧಾನಸಭಾ ಚುನಾವಣೆಗೆ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಜ್ಯದ 49 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಮೊದಲ ಪಟ್ಟಿಯಲ್ಲಿ 93 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದ ಜೆ.ಡಿ.ಎಸ್. ನಿನ್ನೆ 49 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಇನ್ನೂ 82 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಗೆ ಬಾಕಿ ಉಳಿಸಿಕೊಂಡಿದೆ.
ನಿನ್ನೆ ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ ಕುತೂಹಲ ಕೆರಳಿಸಿದ್ದ ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಇಲ್ಲಿ ಸ್ವರೂಪ್ ಪ್ರಕಾಶ್ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಸ್ವರೂಪ್ ಹಾಸನದ ಮಾಜಿ ಶಾಸಕ ಪ್ರಕಾಶ್ ಅವರ ಪುತ್ರ. ಇಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಕಡೂರು ಕ್ಷೇತ್ರದಿಂದ ವೈ.ಎಸ್.ವಿ. ದತ್ತಾ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ.
ಇನ್ನು ಮೊದಲ ಪಟ್ಟಿಯಲ್ಲಿ ಹೆಸರು ಘೋಷಣೆ ಮಾಡಿದ್ದ ಕೆಲವು ಅಭ್ಯರ್ಥಿಗಳು ಬದಲಾಗುವ ಸಾಧ್ಯತೆ ಇದೆ. ಬಿ.ಜೆ.ಪಿ. ಮತ್ತು ಕಾಂಗ್ರೇಸ್ ಪಕ್ಷದಿಂದ ಬರುತ್ತಿರುವ ಕೆಲವು ಶಾಸಕರು, ಮಾಜಿ ಶಾಸಕರನ್ನು ಅಭ್ಯರ್ಥಿಗಳನ್ನಾಗಿ ಮಾಡುವ ಕಸರತ್ತು ನಡೆಸಲಾಗುತ್ತಿದೆ.
ಮೊದಲ ಪಟ್ಟಿಯಲ್ಲಿ ಹೆಸರು ಘೋಷಣೆ ಮಾಡಿದ್ದ ಮೂಡಿಗೆರೆ ಕ್ಷೇತ್ರದ ಅಭ್ಯರ್ಥಿ ಬಿ.ಬಿ. ನಿಂಗಯ್ಯ ನವರ ಬದಲಿಗೆ ನಿನ್ನೆ ಪಕ್ಷ ಸೇರಿದ ಎಂ.ಪಿ. ಕುಮಾರಸ್ವಾಮಿಯವರಿಗೆ ಪಕ್ಷದ ಬಿ.ಫಾರಂ ನೀಡಲಾಗಿದೆ.