ಕಡೂರು ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಮರಳಿ ಜೆ.ಡಿ.ಎಸ್. ಸೇರಿದ್ದಾರೆ. ಇಂದು ತನ್ನ ಸ್ವಗ್ರಾಮ ಕಡೂರು ತಾಲ್ಲೂಕಿನ ಯಗಟಿಯಲ್ಲಿ ಜೆ.ಡಿ.ಎಸ್. ಮುಖಂಡರಾದ ಹೆಚ್.ಡಿ. ರೇವಣ್ಣ ಮತ್ತು ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ದತ್ತಾ ಅವರನ್ನು ಮರಳಿ ಜೆ.ಡಿ.ಎಸ್. ಗೆ ಬರಮಾಡಿಕೊಂಡರು.
ಈಗ್ಗೆ ಎರಡು ತಿಂಗಳ ಹಿಂದೆ ಜೆ.ಡಿ.ಎಸ್. ಮುಖಂಡರ ಜೊತೆ ಮುನಿಸಿಕೊಂಡು ಕಾಂಗ್ರೇಸ್ ಸೇರಿದ್ದ ವೈ.ಎಸ್.ವಿ. ದತ್ತಾ ಕಾಂಗ್ರೇಸ್ ಪಕ್ಷದಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಮುನಿಸಿಕೊಂಡು ಪಕ್ಷೇತರರಾಗಿ ಸ್ಪರ್ಧಿಸುವ ಪ್ರಯತ್ನ ನಡೆಸಿದ್ದರು.
ಈ ನಡುವೆ ನಿನ್ನೆ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರನ್ನು ಭೇಟಿ ಮಾಡಿದ್ದ ದತ್ತಾ ಇದೀಗ ಮರಳಿ ಜೆ.ಡಿ.ಎಸ್. ಸೇರ್ಪಡೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ದತ್ತಾ ದೇವೇಗೌಡರ ಪ್ರೀತಿಗೆ ಕಟ್ಟುಬಿದ್ದು ಅವರ ಆಹ್ವಾನದ ಮೇರೆಗೆ ಜೆ.ಡಿ.ಎಸ್. ಗೆ ಮರಳುತ್ತಿದ್ದೇನೆ ಎಂದರು.
ದತ್ತಾ ಅವರನ್ನು ಜೆ.ಡಿ.ಎಸ್. ಗೆ ಸ್ವಾಗತಿಸಿ ಮಾತನಾಡಿದ ಹೆಚ್.ಡಿ. ರೇವಣ್ಣ ತಪ್ಪು ಗ್ರಹಿಕೆಯಿಂದ ದತ್ತಣ್ಣ ನಮ್ಮ ಪಕ್ಷ ತೊರೆದಿದ್ದರು. ಇದೀಗ ಅವರನ್ನು ಮರಳಿ ಪಕ್ಷಕ್ಕೆ ಕರೆತಂದಿದ್ದೇವೆ. ಅವರು ಕಡೂರು ಕ್ಷೇತ್ರದಲ್ಲಿ ಜೆ.ಡಿ.ಎಸ್. ಅಭ್ಯರ್ಥಿಯಾಗಿ ಏಪ್ರಿಲ್ 18 ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದಿದ್ದಾರೆ.
ಪ್ರಜ್ವಲ್ ರೇವಣ್ಣ ಭವಿಷ್ಯಕ್ಕಾಗಿ ದತ್ತಾ ಮನವೊಲಿಕೆ :
ಕಡೂರು ಕ್ಷೇತ್ರ ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಹಾಲಿ ಜೆ.ಡಿ.ಎಸ್.ನ ಪ್ರಜ್ವಲ್ ರೇವಣ್ಣ ಸಂಸದರಾಗಿದ್ದಾರೆ. ಮುಂಬರುವ ಸಂಸತ್ ಚುನಾವಣೆಯಲ್ಲಿ ಕಡೂರು ಕ್ಷೇತ್ರದಲ್ಲಿ ಜೆ.ಡಿ.ಎಸ್. ಗೆ ಹಿನ್ನಡೆಯಾಗುವುದನ್ನು ತಪ್ಪಿಸಲು ಕಡೂರು ಮಾಜಿ ಶಾಸಕ ದತ್ತಾ ಅವರನ್ನು ಮರಳಿ ಜೆ.ಡಿ.ಎಸ್. ಸೇರ್ಪಡೆ ಮಾಡಿಕೊಳ್ಳಲು ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕಾಗಿ ದೇವೇಗೌಡರೇ ಸ್ವತಃ ದತ್ತಾ ಅವರನ್ನು ಕರೆಸಿಕೊಂಡು ಅವರ ಮನವೊಲಿಸಿದ್ದಾರೆ ಎನ್ನಲಾಗಿದೆ.