ಇತ್ತೀಚೆಗಷ್ಟೇ ಜೆ.ಡಿ.ಎಸ್. ತೊರೆದು ಕಾಂಗ್ರೇಸ್ ಪಕ್ಷವನ್ನು ಸೇರಿದ್ದ ವೈ ಎಸ್ ವಿ ದತ್ತಾ ಕಡೂರು ಕ್ಷೇತ್ರದಲ್ಲಿ ಕಾಂಗ್ರೇಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಆದರೆ ಕಡೂರು ಕ್ಷೇತ್ರದಲ್ಲಿ ದತ್ತಾ ಅವರಿಗೆ ಟಿಕೆಟ ಸಿಕ್ಕಿಲ್ಲ. ಅಲ್ಲಿ ಕಳೆದ ಬಾರಿ ಕಾಂಗ್ರೇಸ್ ಅಭ್ಯರ್ಥಿಯಾಗಿದ್ದ ಕೆ.ಎಸ್. ಆನಂದ್ ಅವರಿಗೆ ಪಕ್ಷ ಮಣೆ ಹಾಕಿದೆ.
ಇದರಿಂದ ನಿರಾಶರಾಗಿರುವ ದತ್ತಾ ಮತ್ತು ಅವರ ಅಭಿಮಾನಿಗಳು ಹೊಸ ಹಾದಿ ಹಿಡಿಯುವ ತವಕದಲ್ಲಿದ್ದಂತೆ ತೋರುತ್ತದೆ.
ವೈ.ಎಸ್.ವಿ. ದತ್ತಾ ಅವರು ತಮ್ಮ ಅಭಿಮಾನಿಗಳಿಗೆ ಭಾವನಾತ್ಮಕವಾದ ಒಂದು ಪತ್ರ ಬರೆದಿದ್ದು ನಾಳೆ ಭಾನುವಾರ ತಮ್ಮ ಅಭಿಮಾನಿಗಳ ಸಭೆ ಕರೆದಿದ್ದಾರೆ.
ಸಭೆಯಲ್ಲಿ ಅಭಿಮಾನಿಗಳ ಅಭಿಪ್ರಾಯದ ಮೇರೆಗೆ ತಮ್ಮ ಮುಂದಿನ ರಾಜಕೀಯ ನಡೆ ನಿರ್ಧರಿಸಲು ದತ್ತಾ ಮುಂದಾದಂತಿದೆ.
ಅಭಿಮಾನಿಗಳಿಗೆ ಬರೆದ ಪತ್ರದಲ್ಲಿ ಅವರು ;
ನನ್ನ ಆಪ್ತ ಬಂಧುಗಳೇ, ನೀವು ನನಗೆ ಪ್ರೀತಿಯನ್ನು ಧಾರೆ ಎರೆದಿದ್ದೀರಿ. ಜಾತಿ ಬಲವಿಲ್ಲದ, ಹಣಬಲವಿಲ್ಲದ ನನ್ನನ್ನು ದತ್ತಣ್ಣ, ನಮ್ಮ ದತ್ತಣ್ಣ ಎಂದು ಅಭಿಮಾನದಿಂದ ತಬ್ಬಿಕೊಂಡು ಬೆಳೆಸಿದ್ದೀರಿ. ಈಗ ಬಂದಿರುವ ವಿಶೇಷ ರಾಜಕೀಯ ಪರಿಸ್ಥಿತಿಯಲ್ಲಿ ನಿಮ್ಮ ಜೊತೆಗೆ ನಾನಿರಬೇಕು, ನನ್ನ ಜೊತೆಗೆ ನೀವಿರಬೇಕು ಎಂಬುದು ಅನಿವಾರ್ಯವಾಗಿದೆ.
ಈ ಕಾರಣದಿಂದ ಇದು ನನ್ನ ಮತ್ತು ನಿಮ್ಮೆಲ್ಲರ ಆತ್ಮಗೌರವಕ್ಕೆ ಆದ ಅಪಮಾನವಾಗಿದೆ. ಹೀಗಾಗಿ ಕ್ಷೇತ್ರದ ಮತದಾರರ ಸ್ವಾಭಿಮಾನಕ್ಕಾಗಿ ನಾನು ನಿಮ್ಮೆಲ್ಲರ ಆಶೀರ್ವಾದವನ್ನು ಬೇಡಲು ಕಡೂರು ಪಟ್ಟಣದಲ್ಲಿ ದಿನಾಂಕ 9-04-2023ರಂದು ಸಭೆ ಕರೆದಿದ್ದೇನೆ.
ತಾವೂ, ತಮ್ಮ ಸಂಗಡಿಗರು, ಬಂಧು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನನ್ನ ಆಶೀರ್ವದಿಸಿ ಹರಸಬೇಕೆಂದು ಕೋರುತ್ತೇನೆ ಎಂದು ದತ್ತಾ ಅವರು ತಮ್ಮ ಅಭಿಮಾನಿಗಳಿಗೆ ಕೈಬರಹದ ಪತ್ರದ ಸಭೆಗೆ ಆಹ್ವಾನಿಸಿದ್ದಾರೆ.
ಸಭೆಯ ನಂತರ ದತ್ತಾ ಅವರು ತಮ್ಮ ಮುಂದಿನ ರಾಜಕೀಯ ನಿರ್ಧಾರವನ್ನು ಪ್ರಕಟಿಸಲಿದ್ದು, ಬಹುತೇಕ ಅವರು ಕಡೂರು ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಈ ಮೂಲಕ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಹೊಸ ರಾಜಕೀಯ ಲೆಕ್ಕಾಚಾರಕ್ಕೆ ದತ್ತಾ ಅವರ ನಿರ್ಧಾರ ನಾಂದಿ ಹಾಡುವ ಸಾಧ್ಯತೆ ಇದೆ.