ಇಲ್ಲೊಂದು ವಿದ್ಯುತ್ ಕಂಬ ಅರ್ಧಕ್ಕೆ ಮುರಿದುಕೊಂಡಿದ್ದು, ಗೈ ವಯರ್ ಸಹಾಯದಿಂದ ಹಾಗೆಯೇ ನಿಂತಿದೆ. ಇವತ್ತೋ ನಾಳೆಯೋ ಅದು ನೆಲಕ್ಕುರುಳಿ ಜೀವಬಲಿಪಡೆಯಲು ಕಾದು ಕುಳಿತಂದಿದೆ. ಆದರೆ ಇದರ ಬಗ್ಗೆ ಸಂಬಂಧಿಸಿದ ಮೆಸ್ಕಾಂ ಇಲಾಖೆಯವರು ಸೂಕ್ತ ಕ್ರಮ ಜರುಗಿಸುತ್ತಿಲ್ಲ.
ಇದು ಮೂಡಿಗೆರೆ ತಾಲ್ಲೂಕು ಬಣಕಲ್ ವಿದ್ಯುತ್ ಉಪಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕುಂದೂರು-ಕಾರ್ಲಗದ್ದೆಯ ಮುಖ್ಯ ರಸ್ತೆಯಲ್ಲಿ ಕಂಡು ಬರುವ ದೃಶ್ಯ.
ಈಗ್ಗೆ 15 ದಿನಗಳ ಹಿಂದೆ ಬೋರ್ವೆಲ್ ಲಾರಿಯೊಂದು ಹಿಮ್ಮುಖವಾಗಿ ಚಲಿಸುವಾಗ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಅರ್ಧಕ್ಕೆ ತುಂಡಾಗಿದೆ. ಇನ್ನೇನು ಮುರಿದು ಬೀಳುವ ಹಂತದಲ್ಲಿದೆ.
ಇದು ಸದಾ ವಾಹನಗಳು ಮತ್ತು ಸಾರ್ವಜನಿಕರು ಹೆಚ್ಚಾಗಿ ಓಡಾಡುವ ರಸ್ತೆಯಾಗಿದೆ. ಸಮೀಪದಲ್ಲಿಯೇ ಶಾಲೆ ಹಾಗೂ ಮನೆಗಳು ಇವೆ. ಜೊತೆಗೆ ಈ ಕಂಬ ರಸ್ತೆಯ ತಿರುವಿನಲ್ಲಿ ಇದೆ. ಕಂಬವೇನಾದರೂ ನೆಲಕ್ಕೆ ಬಿದ್ದರೆ ಜೀವಹಾನಿ ಸಂಭವಿಸುವ ಅಪಾಯ ಇದೆ.
ಈ ಬಗ್ಗೆ ಗ್ರಾಮಸ್ಥರು ಸಂಬಂಧಿಸಿದ ಮೆಸ್ಕಾಂ ಲೈನ್ ಮೆನ್ ಗಳಿಗೆ ಮತ್ತು ಬಣಕಲ್ ಜೆ.ಇ. ಗಮನಕ್ಕೆ ತಂದಿದ್ದಾರೆ. ಆದರೆ ಘಟನೆ ನಡೆದು ಹದಿನೈದು ದಿನಗಳು ಕಳೆದರೂ ಇದರ ಬಗ್ಗೆ ಮೆಸ್ಕಾಂ ನವರು ಗಮನ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ.
ಇಷ್ಟೊಂದು ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಕಂಬವನ್ನು ಬದಲಿಸಿ ಸಂಭವನೀಯ ಅಪಾಯವನ್ನು ತಪ್ಪಿಸುವ ಕಾರ್ಯಕ್ಕೆ ಮೆಸ್ಕಾಂ ತಕ್ಷಣ ಮುಂದಾಗಬೇಕು. ಈ ಬಗ್ಗೆ ಸಂಬಂಧಿಸಿದ ಮೇಲಾಧಿಕಾರಿಗಳು ತಕ್ಷಣ ಬಣಕಲ್ ಜೆ.ಇ. ಯವರಿಗೆ ಸೂಚನೆ ನೀಡಬೇಕು.