ಲೋ ಓಲ್ಟೇಜ್ ವಿದ್ಯುತ್ನಿಂದಾಗಿ ತೋಟದಲ್ಲಿ ಸ್ಪಿಂಕ್ಲರ್ ಮೋಟಾರು ಚಾಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಓಲ್ಟೇಜ್ ಕೊಡಿ ಇಲ್ಲವೇ ಡೀಸೆಲ್ ಕೊಡಿ ಎಂದು ರೈತ ಸಂಘದ ಮುಖಂಡರಿಬ್ಬರು ಶನಿವಾರ ಮೂಡಿಗೆರೆ ಪಟ್ಟಣದ ಮೆಸ್ಕಾಂ ಕಚೇರಿ ಎದುರು ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಮಂಜುನಾಥಗೌಡ ಮಾತನಾಡಿ, ಬೇಸಿಗೆ ಕಾಲದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಕಾಪಿ ತೋಟಕ್ಕೆ ಸ್ಪಿಂಕ್ಲರ್ ಮಾಡಲು ಲೋ ಓಲ್ಟೇಜ್ನಿಂದ ಸಾಧ್ಯವಾಗುತ್ತಿಲ್ಲ. ಇದರಿಂದ ರೈತರು ತಮ್ಮ ಮುಂದಿನ ವರ್ಷದ ಬೆಳೆಗೆ ತೊಂದರೆ ಉಂಟಾಗುತ್ತದೆ. ಈ ಸಮಸ್ಯೆ ಅನೇಕ ವರ್ಷದಿಂದಲೂ ಇದೆ. ಆದರೆ ಸಮಸ್ಯೆ ಬಗೆಹರಿಸುವ ಕೆಲಸ ಮಾತ್ರ ಮೆಸ್ಕಾಂ ಅಧಿಕಾರಿಗಳು ಮಾಡುತ್ತಿಲ್ಲ.
ನಮ್ಮ ಗ್ರಾಮದಲ್ಲಿರುವ ಲೋ ಓಲ್ಟೇಜ್ ಸರಿ ಪಡಿಸಲು ಅನೇಕ ಬಾರಿ ಮೆಸ್ಕಾಂಗೆ ಮನವಿ ಸಲ್ಲಿಸಿದ್ದೇನೆ. ಯಾವುದೇ ಕ್ರಮ ಕೈಗೊಂಡಿಲ್ಲ. ಇವರು ಕೊಡುವ ಲೋ ಓಲ್ಟೇಜ್ನಿಂದ ಮೋಟಾರು ಚಾಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಡೀಸೆಲ್ ನೀಡಬೇಕೆಂದು ಕ್ಯಾನ್ ತಂದು ಧರಣಿ ಕುಳಿತಿದ್ದೇನೆ. ಸಮಸ್ಯೆ ಬಗೆ ಹರಿಸುವವರೆಗೂ ತಾನು ಇಲ್ಲಯೇ ಕದಲುವುದಿಲ್ಲವೆಂದು ಎಚ್ಚರಿಸಿದರು.
ಬಳಿಕ ಮೆಸ್ಕಾಂ ಎಇಇ ಸಂದೇಶ್, ಕೆಪಿಟಿಸಿಎಲ್ ಎಇ ಸಾಯಿ ಹರೀಶ್ ಅವರು, ಗೋಣಿಬೀಡು ಭಾಗದಲ್ಲಿ 10 ಎಚ್ಪಿಗಿಂತ ಅಧಿಕ ಮೋಟಾರು ಬಳಸಿದರೆ ಚಾಲನೆ ಆಗುವುದಿಲ್ಲ. ಇದು ರಾಜ್ಯದಲ್ಲಿಯೇ ಸಮಸ್ಯೆ ಇದೆ. ಬಣಕಲ್ ಮತ್ತು ಬಾಳೂರಿನಲ್ಲಿ ಹೊಸ ಸ್ಟೇಷನ್ ಆಗಿದ್ದರಿಂದ ಸಮಸ್ಯೆಯಿಲ್ಲ. ಜನ್ನಾಪುರದಲ್ಲಿ ಹೊಸ ಸ್ಟೇಷನ್ ಆದರೆ ಸಮಸ್ಯೆ ಸಂಪೂರ್ಣ ಬಗೆಹರಿಯುತ್ತದೆ. ತಮ್ಮ ಭಾಗದ ಕಡೆ ಸೋಮವಾರದೊಳಗೆ 3ಫೇಸ್ ವಿದ್ಯುತ್ ನೀಡಲು ಬದಲಿ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಧರಣಿ ಹಿಂಪಡೆದರು.
ಧರಣಿಯಲ್ಲಿ ರೈತ ಮುಖಂಡ ತ್ರಿಪುರ ಚನ್ನಕೇಶವ ಉಪಸ್ಥಿತರಿದ್ದರು.