ಚುನಾವಣೆಗಳಲ್ಲಿ ಮತದಾನ ಮಾಡದೇ ಬಹಿಷ್ಕಾರ ಮಾಡುವುದು ಸರಿಯಲ್ಲ ಎಂದು ಜಾಗೃತ ಮತದಾರರ ವೇದಿಕೆಯ ರಾಜ್ಯಾಧ್ಯಕ್ಷ ಮಹೇಂದ್ರಕುಮಾರ್ ಫಲ್ಗುಣಿ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಅಭಿವೃದ್ದಿ ಕಾರ್ಯಗಳು ನಡೆದಿಲ್ಲ ಎಂಬ ನಿಟ್ಟಿನಲ್ಲಿ ರಾಜ್ಯದ ನಾನಾ ಕಡೆಗಳಲ್ಲಿ ಮತದಾನ ಬಹಿಷ್ಕಾರ ಮಾಡುವ ಬ್ಯಾನರ್ಗಳನ್ನು ಹಾಕಿ ಮತದಾನದಿಂದ ಹೊರಗುಳಿಯುವ ನಿಲುವನ್ನು ವ್ಯಕ್ತಪಡಿಸಲಾಗುತ್ತಿದೆ. ಆದರೆ ಅಭಿವೃದ್ದಿ ಕಾರ್ಯಗಳು ನಡೆದಿಲ್ಲ ಎಂಬ ಕಾರಣಕ್ಕೆ ಮತದಾನದಿಂದ ಹೊರಗುಳಿದರೆ ಯೋಗ್ಯರಲ್ಲದ ವ್ಯಕ್ತಿ ಆಯ್ಕೆಯಾಗುವ ಅಪಾಯವಿರುತ್ತದೆ. ಅಭಿವೃದ್ದಿ ಕಾರ್ಯಗಳು ಆಗದಿದ್ದರೆ ಗ್ರಾಮದವರೆಲ್ಲಾ ಸೇರಿ ಒಗ್ಗಟ್ಟಿನಿಂದ ಹೋರಾಟದ ಹಾದಿಯನ್ನು ಹಿಡಿದು ಅಭಿವೃದ್ದಿ ಕಾರ್ಯಗಳನ್ನು ನಡೆಸುವಂತಹ ಚುನಾಯಿತ ಪ್ರತಿನಿಧಿಗಳ ಕಿವಿ ಹಿಂಡಬೇಕು.
ಚುನಾವಣೆಯಲ್ಲಿ ಒಂದೊಂದು ಮತಕ್ಕೂ ತನ್ನದೇ ಮೌಲ್ಯವಿರುವುದರಿಂದ ಮತದಾನವನ್ನು ಬಹಿಷ್ಕಾರ ಮಾಡಿದರೇ ಸಂವಿದಾನ ನೀಡಿದ ಶ್ರೇಷ್ಠ ಹಕ್ಕಿನಿಂದ ಹೊರಗುಳಿದಂತಾಗುತ್ತದೆ. ಯಾವುದೇ ಗ್ರಾಮದಲ್ಲೂ ಮತದಾನ ಬಹಿಷ್ಕಾರವನ್ನು ಮಾಡದೇ ಮತದಾನದಲ್ಲಿ ಪಾಲ್ಗೊಂಡು ಯೋಗ್ಯ ವ್ಯಕ್ತಿಯ ಆಯ್ಕೆ ಮಾಡಬೇಕು ಎಂದು ತಿಳಿಸಿದ್ದಾರೆ.