ಮೂಡಿಗೆರೆ ಪಟ್ಟಣದ ಪೊಲೀಸ್ ಠಾಣೆ ಪಕ್ಕ ಸೋಮವಾರ ಆಟೋ ಸ್ಟಾಂಡ್ ನಿರ್ಮಾಣದ ಕಾಮಗಾರಿ ನಡೆಯುತ್ತಿರುವಾಗ ಪ.ಪಂ. ಮುಖ್ಯಾಧಿಕಾರಿ ಮಂಜುನಾಥ್ ಅವರು ತಮ್ಮ ಸಿಬ್ಬಂದಿ ಹಾಗೂ ಜೆಸಿಬಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಕಾಮಗಾರಿ ನಡೆಸದಂತೆ ತಡೆ ಹಾಕಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ.ಪಂ. 3 ಮಂದಿ ಸದಸ್ಯರು ಉಪ ವಿಭಾಗಾಧಿಕಾರಿ ಎಚ್.ಡಿ.ರಾಜೇಶ್ ಅವರ ಮೂಲಕ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಆಟೋ ಚಾಲಕರಿಗೆ ಅನುಕೂಲವಾಗಲು ಪಟ್ಟಣದ ಪೊಲೀಸ್ ಠಾಣೆ ಪಕ್ಕದಲ್ಲಿ ಆಟೋ ಸ್ಟಾಂಡ್ ನಿರ್ಮಿಸಲು ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಅವರು 4.5 ಲಕ್ಷ ರೂ ಎಂಎಲ್ಸಿ ಅನುದಾನ ನೀಡಿದ್ದರು. ಆಟೋ ಸ್ಟಾಂಡ್ ನಿರ್ಮಿಸಲು ಯಾವುದೇ ಅಭ್ಯಂತರವಿಲ್ಲವೆಂದು ಕೂಡ ಮುಖ್ಯಾಧಿಕಾರಿಗಳು ಬರವಣಿಗೆಯಲ್ಲಿ ತಿಳಿಸಿದ್ದಾರೆ. ಆದರೆ ಆಟೋ ಸ್ಟಾಂಡ್ ನಿರ್ಮಾಣಕ್ಕೆ ಕಬ್ಬಿಣದ ಮೇಲ್ಚಾವಣಿ ಹಾಕುವ ಸಂದರ್ಭದಲ್ಲಿ ಮುಖ್ಯಾಧಿಕಾರಿ ಮಂಜುನಾಥ್ ಅವರು ಸಿಬ್ಬಂದಿ ಹಾಗೂ ಜೆಸಿಬಿ ಮೂಲಕ ಮೇಲ್ಚಾವಣಿ ಕೆಡವಲು ಪ್ರಯತ್ನಿಸಿದ್ದಾರೆ.
ಇದು ಉಪಸಭಾಪತಿ ಅವರಿಗೆ ಮಾಡಿದ ಅಪಮಾನವಾಗಿದೆ. ಅಲ್ಲದೇ ಗುತ್ತಿಗೆದಾರರ ವಿರುದ್ಧ ಅವರು ಪೊಲೀಸ್ ಠಾಣೆಗೆ ದೂರು ನೀಡಲು ತೆರಳುವ ಸಂದರ್ಭದಲ್ಲಿ ಪ.ಪಂ. ಸದಸ್ಯರೊಂದಿಗೆ ಏಕವಚನದಿಂದ ಮಾತನಾಡಿದ್ದಾರೆ. ಹಾಗಾಗಿ ಮುಖ್ಯಾಧಿಕಾರಿಯನ್ನು ಕೂಡಲೇ ಅಮಾನತ್ತುಪಡಿಸಿ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ.ಪಂ. ಸದಸ್ಯರಾದ ಅನುಕುಮಾರ್, ಸುಧೀರ್, ಮನೋಜ್ ಮತ್ತಿತರರಿದ್ದರು.