ಆಲ್ದೂರು ಪಟ್ಟಣದ ಪೂರ್ಣಪ್ರಜ್ಞಾ ಶಾಲೆಯ ಬಳಿ ರಸ್ತೆಗೆ ಅಳವಡಿಸಿದ್ದ ಅವೈಜ್ಞಾನಿಕ ಹಂಪ್ಸ್ ಗೆ ಮತ್ತೊಂದು ಜೀವ ಬಲಿಯಾಗಿದೆ.
ಹಂಪ್ ದಾಟುವಾಗ ಬೈಕಿನಿಂದ ಬಿದ್ದು ತೀವ್ರಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದ ಸಮೀಪದ ಕಂಡರಕಸ್ಕೆ ಗ್ರಾಮದ ಶ್ರೀಮತಿ ಜಯ (65ವರ್ಷ) ಇಂದು ಶಿವಮೊಗ್ಗ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮಾರ್ಚ್ 23ರಂದು ತನ್ನ ಪತಿ ಮಂಜೇಗೌಡ ಅವರೊಂದಿಗೆ ಬೈಕ್ ನಲ್ಲಿ ತೆರೆಳುತ್ತಿದ್ದಾಗ ಆಲ್ದೂರು ಮೂಡಿಗೆರೆ ರಸ್ತೆಯಲ್ಲಿರುವ ಎತ್ತರದ ರಸ್ತೆ ಹಂಪ್ ಬಳಿ ಜಯ ಅವರು ಆಯಾತಪ್ಪಿ ರಸ್ತೆಗೆ ಬಿದ್ದಿದ್ದರು. ಬಿದ್ದ ರಭಸಕ್ಕೆ ಅವರ ತಲೆಗೆ ತೀವ್ರ ಪೆಟ್ಟಾಗಿತ್ತು.
ಕಳೆದ ಒಂದು ವಾರದಿಂದ ಶಿವಮೊಗ್ಗ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿ ಇದ್ದ ಜಯಾ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
ಜಯ ಆವರು ಕಂಡರಕಸ್ಕೆ ಕೃಷಿಕ ಮಂಜೇಗೌಡ ಅವರು ಧರ್ಮಪತ್ನಿ. ಮೂಡಿಗೆರೆ ತಾಲ್ಲೂಕಿನ ಕೊಟ್ರಕೆರೆ ಇವರ ತವರು ಮನೆ.
ಮೃತರು ಪತಿ, ಓರ್ವ ಪುತ್ರ, ಓರ್ವ ಪುತ್ರಿ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಹದಿನೈದು ದಿನಗಳಲ್ಲಿ ಎರಡನೇ ಬಲಿ ; ಜೀವಹಾನಿ ಆದ ನಂತರ ಹಂಪ್ಸ್ ತೆರವು
ಆಲ್ದೂರು ಪೂರ್ಣಪ್ರಜ್ಞಾ ಶಾಲೆಯ ಬಳಿ ಅಳವಡಿಸಿದ್ದ ಎತ್ತರದ ಹಂಪ್ಸ್ ಹದಿನೈದು ದಿನಗಳಲ್ಲಿ ಎರಡನೇ ಬಲಿ ಪಡೆದಿದೆ. ಇದೇ ಮಾರ್ಚ್ 14ರಂದು ಆಲ್ದೂರು ಪಟ್ಟಣದ ಅಶ್ರಫ್ ಉನ್ನೀಸ್ ಎನ್ನುವ ಮಹಿಳೆ ಸ್ಕೂಟಿಯಲ್ಲಿ ಹಿಂಬದಿ ಕುಳಿತು ಹಂಪ್ಸ್ ದಾಟುವಾಗ ಬಿದ್ದು ಮೃತಪಟ್ಟಿದ್ದರು.
ಇದೀಗ ಎಚ್ಚೆತ್ತುಕೊಂಡಿರುವ ಆಡಳಿತ ಸಾರ್ವಜನಿಕರ ತೀವ್ರ ಆಕ್ರೋಶದ ನಂತರ ಅವೈಜ್ಞಾನಿಕ ಹಂಪ್ಸ್ ತೆರವುಗೊಳಿಸಿದೆ. ಬಹಳ ವರ್ಷಗಳಿಂದ ಈ ಹಂಪ್ಸ್ ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದರು. ಆದರೆ ಸಂಬಂಧಿಸಿದ ಇಲಾಖೆಯವರು ಈ ಬಗ್ಗೆ ಕ್ರಮವಹಿಸಿರಲಿಲ್ಲ. ಆದರೆ ಈಗ ಎರಡು ಜೀವಗಳು ಬಲಿಯಾದ ನಂತರ ಹಂಪ್ಸ್ ತೆರವುಗೊಳಿಸಲಾಗಿದೆ.