ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಬಿ.ಎಸ್.ಪಿ. ಮಾಜಿ ರಾಜ್ಯಾಧ್ಯಕ್ಷ ಬಿ.ಗೋಪಾಲ್ ಕಾಂಗ್ರೇಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.
ರಾಜ್ಯದ ಪ್ರಭಾವಿ ದಲಿತ ಮುಖಂಡರಾಗಿರುವ ಬಿ.ಗೋಪಾಲ್ ಆನೆಕಲ್ ಮೂಲದವರು. ಈ ಹಿಂದೆ ಬಿಎಸ್ಪಿ ರಾಜ್ಯ ಅಧ್ಯಕ್ಷರಾಗಿದ್ದರು. 2008 ರಲ್ಲಿ ಮಾಯಾವತಿಯವರೊಂದಿಗಿನ ಮನಸ್ತಾಪದಿಂದ ಬಿಎಸ್ಪಿ ಯಿಂದ ಹೊರಬಂದು ತಮ್ಮದೇ ಆದ ಪ್ರಜಾ ಪರಿವರ್ತನ ಪಾರ್ಟಿ ಸ್ಥಾಪನೆ ಮಾಡಿದ್ದರು.
ಇದೀಗ ಬಿ.ಗೋಪಾಲ್ ಅವರು ತಮ್ಮ ಅನೇಕ ಬೆಂಬಲಿಗರು ಮತ್ತು ರಾಜ್ಯದ ಅನೇಕ ಹಿರಿಯ ದಲಿತ ಮುಖಂಡರೊಂದಿಗೆ ಕಾಂಗ್ರೇಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.
ಇಂದು ಬೆಂಗಳೂರಿನ ಕೆ.ಪಿ.ಸಿ.ಸಿ. ಕಛೇರಿಯಲ್ಲಿ ಕಾಂಗ್ರೇಸ್ ರಾಜ್ಯ ಉಸ್ತುವಾರಿ ಸುರ್ಜೆವಾಲ, ಹಿರಿಯ ಮುಖಂಡರಾದ ಸಿದ್ಧರಾಮಯ್ಯ, ಜಿ.ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ, ಆಂಜನೇಯ ಸೇರಿದಂತೆ ಹಲವು ಮುಖಂಡರ ಉಪಸ್ಥಿತಿಯಲ್ಲಿ ಕಾಂಗ್ರೇಸ್ ಸೇರ್ಪಡೆಯಾಗಿದ್ದಾರೆ.
ಮೂಡಿಗೆರೆ ಕ್ಷೇತ್ರದ ಟಿಕೆಟ್ ಗೆ ಬೇಡಿಕೆ ?
ದಲಿತ ಸಮುದಾಯದ ಬಲಗೈ ಪಂಗಡದ ಬಿ.ಗೋಪಾಲ್ ಸದ್ಯ ರಾಜ್ಯದಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿರು ಬಲಗೈ ಎಡಗೈ ದಲಿತ ಸಮುದಾಯದ ಐಕ್ಯತಾ ಸಮಿತಿಯನ್ನು ರಚಿಸಿ ಅದನ್ನು ಮುನ್ನಡೆಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ದಲಿತ ಐಕ್ಯತಾ ಸಮಿತಿ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸುವ ಮಾತುಕತೆ ನಡೆದಿದೆ.
ಬಿ.ಗೋಪಾಲ್ ಅವರು ಮುಂದಿನ ಚುನಾವಣೆಯಲ್ಲಿ ಮೀಸಲು ಕ್ಷೇತ್ರವೊಂದರಲ್ಲಿ ಟಿಕೆಟ್ ನೀಡುವ ಆಶ್ವಾಸನೆಯೊಂದಿಗೆ ಕಾಂಗ್ರೇಸ್ ಸೇರ್ಪಡೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ಆಗುತ್ತಿರುವ ಚರ್ಚೆಯಂತೆ ಅವರು ಮೂಡಿಗೆರೆ ಕ್ಷೇತ್ರದಿಂದ ಕಾಂಗ್ರೇಸ್ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದು ಟಿಕೇಟ್ ನೀಡುವ ಭರವಸೆ ನೀಡಿದರೆ ಮಾತ್ರ ಕಾಂಗ್ರೇಸ್ ಸೇರುವುದಾಗಿ ಷರತ್ತು ಹಾಕಿದ್ದರು ಎನ್ನಲಾಗಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಇವತ್ತು ಅವರು ಕಾಂಗ್ರೇಸ್ ಸೇರ್ಪಡೆ ಆಗುವ ಸಂದರ್ಭದಲ್ಲಿ ಮೂಡಿಗೆರೆ ಕ್ಷೇತ್ರದಿಂದ ಸುಮಾರು 200ಕ್ಕೂ ಅಧಿಕ ಮಂದಿ ಬಸ್ ಮಾಡಿಕೊಂಡು ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಮೂಡಿಗೆರೆ ತಾಲ್ಲೂಕು ಕಾಂಗ್ರೇಸ್ ವಕ್ತಾರ ಮರಗುಂದ ಪ್ರಸನ್ನ ಸೇರಿದಂತೆ ಅನೇಕ ಮುಖಂಡರು ಭಾಗಹಿಸಿದ್ದಾರೆ.
ಬಿ.ಗೋಪಾಲ್ ಅವರು ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ರಾಜ್ಯದಾದ್ಯಂತ ದಲಿತ ಮತಗಳ ಮೇಲೆ ಪ್ರಭಾವ ಬೀರಲಿದ್ದು, ಅದು ಕಾಂಗ್ರೇಸ್ ಗೆ ಹೆಚ್ಚಿನ ಶಕ್ತಿ ತುಂಬಲಿದೆ ಎಂದು ಹಾಗಾಗಿ ಅವರಿಗೆ ಅವರು ಕೇಳಿದ ಕ್ಷೇತ್ರದಲ್ಲಿ ಟಿಕೆಟ್ ನೀಡಲು ಪಕ್ಷದ ವರಿಷ್ಠರ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯ, ಜಿ. ಪರಮೇಶ್ವರ್ ಸೇರಿದಂತೆ ಕಾಂಗ್ರೇಸ್ ನ ಅನೇಕ ಹಿರಿಯ ಮುಖಂಡರೊಂದಿಗೆ ಬಿ.ಗೋಪಾಲ್ ಆತ್ಮೀಯ ಒಡನಾಟ ಹೊಂದಿದ್ದಾರೆ ಎನ್ನಲಾಗಿದೆ.
ಬಲ್ಲ ಮೂಲಗಳ ಪ್ರಕಾರ ಬಿ.ಗೋಪಾಲ್ ಈಗಾಗಲೇ ಮೂಡಿಗೆರೆ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಅಲ್ಲಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದ್ದಾರೆ ಎನ್ನಲಾಗಿದೆ.
ಇದರೊಂದಿಗೆ ಮೂಡಿಗೆರೆ ಕ್ಷೇತ್ರದಲ್ಲಿ ಕಾಂಗ್ರೇಸ್ ಟಿಕೆಟ್ ಪೈಪೋಟಿ ಹೆಚ್ಚಾಗತೊಡಗಿದೆ. ಈಗಾಗಲೇ ಮಾಜಿ ಸಚಿವೆ ಶ್ರೀಮತಿ ಮೋಟಮ್ಮನವರ ಪುತ್ರಿ ನಯನಾ ಮೋಟಮ್ಮ ಕಾಂಗ್ರೇಸ್ ಅಭ್ಯರ್ಥಿ ಆಕಾಂಕ್ಷಿಯಾಗಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅವರಲ್ಲದೇ ಶ್ರೀರಂಗಯ್ಯ, ಎಂ.ಸಿ.ಹೂವಪ್ಪ, ಪ್ರಭಾಕರ್ ಬಿನ್ನಡಿ ಇವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಗೊಂದಲದಿಂದ ಶಾಸಕ ಎಂ.ಪಿ.ಕುಮಾರಸ್ವಾಮಿಯರಿಗೆ ಬಿ.ಜೆ.ಪಿ. ಟಿಕೆಟ್ ನಿರಾಕರಿಸಿದರೆ ಕಾಂಗ್ರೇಸ್ ಅಭ್ಯರ್ಥಿಯಾಗುವ ಸಾಧ್ಯತೆಯ ಬಗ್ಗೆಯೂ ಕ್ಷೇತ್ರದಲ್ಲಿ ಚರ್ಚೆ ನಡೆಯುತ್ತಿದೆ.
ಇದೆಲ್ಲದರ ನಡುವೆ ಇದೀಗ ಬಿ.ಗೋಪಾಲ್ ಹೆಸರು ಚರ್ಚೆಗೆ ಬರುತ್ತಿದ್ದೆ. ಅವರು ಅಧಿಕೃತವಾಗಿ ಕಾಂಗ್ರೇಸ್ ಸೇರ್ಪಡೆಯಾಗಿರುವುದು, ಅವರು ಕ್ಷೇತ್ರದಲ್ಲಿ ಪ್ರವಾಸ ಮಾಡಲಿದ್ದಾರೆ ಎಂಬ ಸುದ್ದಿ ಹರಡಿರುವುದು ಒಟ್ಟಾರೆ ಕ್ಷೇತ್ರದ ಕಾಂಗ್ರೇಸ್ ಪಾಳಯದಲ್ಲಿ ಅಭ್ಯರ್ಥಿ ಆಯ್ಕೆಯ ಗೊಂದಲವನ್ನು ಇನ್ನಷ್ಟು ಹೆಚ್ಚಿಸಿದೆ.