ನಿನ್ನೆ ಮೂಡಿಗೆರೆ ಪಟ್ಟಣದಲ್ಲಿ ಬಿ.ಜೆ.ಪಿ. ಪಕ್ಷ ಹಮ್ಮಿಕೊಂಡಿದ್ದ ವಿಜಯಸಂಕಲ್ಪ ಯಾತ್ರೆ ಕಾರ್ಯಕರ್ತರ ಗಲಭೆಯಿಂದ ರದ್ದಾಗಿರುವುದು ರಾಜ್ಯದಲ್ಲಿ ಬಿ.ಜೆ.ಪಿ. ಪಕ್ಷ ಮತ್ತು ಸರ್ಕಾರದ ಅರಾಜಕತೆಗೆ ಸ್ಪಷ್ಟ ನಿದರ್ಶನವಾಗಿದೆ ಎಂದು ಮೂಡಿಗೆರೆ ಬ್ಲಾಕ್ ಕಾಂಗ್ರೇಸ್ ವಕ್ತಾರ ಮರಗುಂದ ಪ್ರಸನ್ನ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಭಾಗವಹಿಸಬೇಕಾಗಿದ್ದ ವಿಜಯ ಸಂಕಲ್ಪ ಯಾತ್ರೆ ರದ್ದಾಗಿರುವುದನ್ನು ನೋಡಿದರೆ ಬಿಜೆಪಿಯಲ್ಲಿ ಒಂದು ರೀತಿಯ ಗಾದೆ ಮಾತಿನಂತೆ ಬಾಲವೇ ನಾಯಿಯನ್ನು ಅಲ್ಲಾಡಿಸುವ ಮಟ್ಟಕ್ಕೆ ಬೆಳೆದಿರುವುದು ಗೋಚರಿಸುತ್ತದೆ. ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಕರ್ನಾಟಕದ ವಿಧಾನಸಭಾ ಚುನಾವಣೆಯ ನಾಯಕತ್ವವನ್ನು ವಹಿಸಿರುವ ಯಡಿಯೂರಪ್ಪನವರಿಗಾಗಲಿ ಬಿಜೆಪಿಯ ರಾಷ್ಟ್ರೀಯ ನಾಯಕರ ಸಿ.ಟಿ ರವಿ ಅವರಿಗೆ ಪಕ್ಷದ ಕಾರ್ಯಕರ್ತರ ಮೇಲೆ ಮತ್ತು ಕಾನೂನು ಸುವ್ಯವಸ್ಥೆಯ ಮೇಲೆ ಯಾವುದೇ ಹಿಡಿತ ಇಲ್ಲದಿರುವುದು ಕಂಡು ಬರುತ್ತಿದೆ. ಪಕ್ಷದ ಬಣ ಬಡಿದಾಟಕ್ಕೆ ವಿಜಯ ಸಂಕಲ್ಪ ಯಾತ್ರೆಯನ್ನೇ ರದ್ದು ಮಾಡಬೇಕಾಗಿ ಬಂದಿರುವುದು ಶಿಸ್ತಿನ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿ ತಲುಪಿರುವ ಅದೋಗತಿಯನ್ನ ತೋರ್ಪಡಿಸಿದೆ.
ತಮ್ಮ ಪಕ್ಷವನ್ನೇ ಹಿಡಿತದಲ್ಲಿಟ್ಟುಕೊಳ್ಳಲಾರದ ನಾಯಕತ್ವವನ್ನು ಹೊಂದಿರುವ ಬಿಜೆಪಿ ಸರ್ಕಾರವನ್ನ ಯಾವ ರೀತಿಯಲ್ಲಿ ನಡೆಸಿದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಅರಾಜಕತೆಯಿದ್ದು . ಗೃಹ ಮಂತ್ರಿಗಳು ಒಂದು ಹೇಳಿಕೆ ನೀಡಿದರೆ ಅವರ ಅಧೀನ ಅಧಿಕಾರಿಗಳು ಹಲವು ಸಂದರ್ಭಗಳಲ್ಲಿ ವ್ಯತಿರಕ್ತ ಹೇಳಿಕೆ ನೀಡಿದ್ದನ್ನ ನಾವು ನೆನಪು ಮಾಡಿಕೊಳ್ಳಬಹುದು. ಆಡಳಿತದಲ್ಲಿ ಹಿಡಿತವಿಲ್ಲದಿರುವುದರಿಂದಲೇ 40% ಕಮಿಷನ್ ಸರ್ಕಾರ ನಡೆಯುತ್ತಿದೆ. ಪಕ್ಷದ ಮೇಲೆ ಹಿಡಿತವಿಲ್ಲದವರಿಗೆ ಅಧಿಕಾರ ಕೊಟ್ಟರೆ ಸರ್ಕಾರವನ್ನ ಯಾವ ರೀತಿ ನಡೆಸಬಹುದು ಎಂಬುದನ್ನು ಜನತೆ ಮುಂದಾಲೋಚಿಸಬೇಕಾಗಿದೆ.
ಮೂಡಿಗೆರೆಯಲ್ಲಿ ಬಿ.ಜೆ.ಪಿ. ಕಾರ್ಯಕರ್ತರು ರಾಜ್ಯದ ಮಾಜಿ ಮುಖ್ಯಮಂತ್ರಿಯವರಿಗೆ ಅವಮಾನ ಮಾಡಿ ಕಳುಹಿಸಿರುವುದು ನಾಚಿಕೆಗೇಡಿನ ಸಂಗತಿ ಇದು ಮೂಡಿಗೆರೆ ಕ್ಷೇತ್ರಕ್ಕೆ ಒಂದು ಕಪ್ಪುಚುಕ್ಕಿಯಾಗಿದ್ದು ಶಾಂತಿ ಸೌಹಾರ್ದತೆಗೆ ಹೆಸರಾಗಿದ್ದ ಮೂಡಿಗೆರೆ ಹೆಸರಿಗೆ ಬಿ.ಜೆ.ಪಿ. ಮಸಿ ಬಳಿದಿದೆ. ಕ್ಷೇತ್ರದ ಜನರು ಮುಂಬರುವ ಚುನಾವಣೆಯಲ್ಲಿ ಬಿ.ಜೆ.ಪಿ.ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮರಗುಂದ ಪ್ರಸನ್ನ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.