ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ನಿಡುವಾಳೆ ಗ್ರಾ.ಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ಕೆಲ ಗ್ರಾಮಸ್ಥರು ಹಕ್ಕುಪತ್ರಗಳಿಗಾಗಿ ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಹಕ್ಕುಪತ್ರ ಬಾರದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
94ಸಿಯಲ್ಲಿ ವರ್ಷದ ಹಿಂದೆ ನಿಡುವಾಳೆ, ಮರ್ಕಲ್ ಗ್ರಾಮದ 75 ಕುಟುಂಬಗಳು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು ಅವುಗಳಲ್ಲಿ 30 ಕುಟುಂಬಗಳಿಗೆ ಹಕ್ಕುಪತ್ರಕ್ಕೆ ಅನುಮೋದನೆ ದೊರಕಿದ್ದು ವರ್ಷ ಕಳೆದರೂ ಆ 30 ಕುಟುಂಬಗಳಿಗೆ ಹಕ್ಕುಪತ್ರ ದೊರೆತಿಲ್ಲ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು ಜನಾಂಗದ ಕುಟುಂಬಗಳು ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಹಕ್ಕುಪತ್ರವನ್ನು ನೀಡಲು ವಿಳಂಬ ಮಾಡುತ್ತಿರುವುದು ಪಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಿಡುವಾಳೆ ಗ್ರಾ.ಪಂ ಉಪಾಧ್ಯಕ್ಷ ನವೀನ್ ಹಾವಳಿ, ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಬಹುತೇಕ ಅನಕ್ಷರಸ್ಥರಾದ ಈ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಮುಂದಾಗಬೇಕು ಎಂದು ತಿಳಿಸಿದ್ದಾರೆ.