ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಮತ ಬೀಳುವುದಿಲ್ಲವೆಂಬ ಕಾರಣಕ್ಕೆ ಹೆದರಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಬಗ್ಗೆ ಮೂಡಿಗೆರೆ ಪಟ್ಟಣ ಪಂಚಾಯಿತಿ ಕಾಂಗ್ರೇಸ್ ಸದಸ್ಯ ಹಂಜಾ ಅವರು ಮನ ಬಂದಂತೆ ಮಾತನಾಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಜಕರಿಯಾ ಜಾಕೀರ್ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮೂಡಿಗೆರೆಯಲ್ಲಿ ಜೆಡಿಎಸ್ನಿಂದ ಆಯೋಜಿಸಿದ್ದ ಪಂಚರತ್ನ ರಥ ಯಾತ್ರೆಗೆ ಸಿ.ಎಂ ಇಬ್ರಾಹಿಂ ಅವರು ಆಗಮಿಸಿದ್ದಾಗ ಕ್ಷೇತ್ರದಲ್ಲಿ 3 ಕಡೆ, ಪಟ್ಟಣದಲ್ಲಿ 1 ಮುಸ್ಲೀಂ ಮುಖಂಡರ ಸಭೆ ನಡೆಸಲಾಯಿತು. ಸಭೆಗೆ 200ಕ್ಕೂ ಅಧಿಕ ಮುಖಂಡರು, ಮಸೀದಿ ಅಧ್ಯಕ್ಷರು ಹಾಗೂ ಕೆಲ ಕಾಂಗ್ರೆಸ್ ಮುಖಂಡರು ಸಹ ಭಾಗವಹಿಸಿದ್ದರು. ಸಭೆಯಲ್ಲಿ ಸಿ.ಎಂ.ಇಬ್ರಾಹಿಂ ಅವರು ಮುಂದಿನ ಚುನಾವಣೆ ಬಗ್ಗೆ ಚರ್ಚೆ ನಡೆಸಿ ಜೆಡಿಎಸ್ಗೆ ಬೆಂಬಲಿಸಬೇಕೆಂದು ಮನವಿ ಮಾಡಿಕೊಂಡಾಗ ಸಭೆಯಲ್ಲಿದ್ದವರು ತಮ್ಮ ಸಹಮತ ಸೂಚಿಸಿದರು.
ಸಭೆ ಯಶಸ್ಸನ್ನು ಕಂಡ ಕೆಲ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಾಧ್ಯಕ್ಷರ ಬಗ್ಗೆ ಕೀಳು ಮಟ್ಟದ ಪದಗಳನ್ನು ಬಳಸಿ ಸಾಮಾಜಿಕ ಜಾಲಾತಾಣದಲ್ಲಿ ಅಪಪ್ರಚಾರ ಮಾಡಿದ್ದಾರೆ. ಹಿಜಾಬ್, ಹಲಾಲ್ಕಟ್ ವಿಚಾರ ಬಂದಾಗ ಮಾತನಾಡದ ಅವರು, ಈಗ ಮುಸ್ಲಿಮರು ಜೆಡಿಎಸ್ನತ್ತ ಒಲವು ತೋರುವುದನ್ನು ಸಹಿಸಿಕೊಳ್ಳದೇ ಇಂತಹ ಹೇಳಿಕೆ ನೀಡುತ್ತಿದ್ದಾರೆ.
ಕಾಂಗ್ರೆಸ್ನಲ್ಲಿ ಹಿಂದಿನಿಂದಲೂ ಮುಸ್ಲಿಮರನ್ನು ಹೀನಾಯವಾಗಿ ಬಳಸಿಕೊಳ್ಳಲಾಗಿದೆ. ನಮಗೆ ಬ್ರಿಟೀಷರಿಂದ ಸ್ವಾತಂತ್ರ್ಯ ಸಿಕ್ಕಿಗೆ ಆದರೆ ಮುಸ್ಲಿಂಮರಿಗೆ ಕಾಂಗ್ರೇಸ್ ನಿಂದ ಮುಕ್ತಿ ದೊರೆಯಬೇಕಾದರೆ ಜೆ.ಡಿ.ಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು. ಜೆ.ಡಿ.ಎಸ್. ಅಧಿಕಾರಕ್ಕೆ ಬಂದರೆ ಸಿ.ಎಂ. ಇಬ್ರಾಹಿಂ ಉಪಮುಖ್ಯಮಂತ್ರಿಯಾಗುವ ಅವಕಾಶ ಇದೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಮುಸ್ಲಿಮರು ಜೆಡಿಎಸ್ನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ಮುಖಂಡರಾದ ಆಸಿಫ್, ಸೈಯದ್ ಫಯಾಜ್, ಗೌಸಿಫ್ ಅಹಮ್ಮದ್, ಮಹಮ್ಮದ್ ಅಣಜೂರು, ಸೈಯದ್ ರಿಜ್ವಾನ್, ಸಹೂದ್ ಇದ್ದರು.