ಇತ್ತೀಚೆಗೆ ಜೆಡಿಎಸ್ ಪಕ್ಷದಿಂದ ಮೂಡಿಗೆರೆಯಲ್ಲಿ ಆಯೋಜಿಸಿದ್ದ ಪಂಚರತ್ನ ರಥಯಾತ್ರೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ವೇದಿಕೆಯಲ್ಲಿ ಮಾತನಾಡುವಾಗ ತಮ್ಮ ಮಾತಿನ ಭರಾಟೆಯಲ್ಲಿ ಮುಸ್ಲಿಂ ಜನಾಂಗಕ್ಕೆ ನೋವಾಗುವ ರೀತಿಯಲ್ಲಿ ಮಾತನಾಡಿದ್ದಾರೆಂದು ಮೂಡಿಗೆರೆ ಪ.ಪಂ. ಸದಸ್ಯ ಎಂ.ಎ.ಹಂಜಾ ದೂರಿದರು.
ಅವರು ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿ.ಎಂ. ಇಬ್ರಾಹಿಂ ಅವರು ಮೂಡಿಗೆರೆಗೆ ಬಂದಾಗ ಮುಸ್ಲಿಂ ಸಮಾಜದ ಜತೆಗೆ 3 ಸಬೆ ನಡೆಸಿದ್ದೇನೆ. ಬ್ಯಾರಿ ಸಮಾಜದವರು ಜೆಡಿಎಸ್ಗೆ ಬೆಂಬಲ ನೀಡುತ್ತೇವೆಂದು ಕಮಿಟಿಯಲ್ಲಿ ನಿರ್ಣಯ ಮಾಡಿದ್ದಾರೆ. ಅಲ್ಲದೇ ಪಟ್ಟಣದಲ್ಲಿ ನಡೆಸಿದ ಸಭೆಯಲ್ಲಿ 20 ಮಸೀದಿಗಳ ಅಧ್ಯಕ್ಷರು ಕೂಡ ಜೆಡಿಎಸ್ಗೆ ಬೆಂಬಲ ನೀಡುತ್ತೇವೆಂದು ಕಮಿಟಿಯಲ್ಲಿ ನಿರ್ಣಯ ಮಾಡಿದ್ದೇವೆಂದು ಹೇಳಿದ್ದಾರೆಂದು ವೇದಿಕೆಯಲ್ಲಿ ಬಹಿರಂಗವಾಗಿ ಸಿ.ಎಂ. ಇಬ್ರಾಹಿಂ ಅವರು ಹೇಳಿದ್ದಾರೆ. ಅವರು ಹೇಳಿರುವ ಮಾತು ಶುದ್ಧ ಸುಳ್ಳು. ಬಹುತೇಕ ರಾಜಕಾರಣಿಗಳು ಸುಳ್ಳು ಹೇಳುವವರಿದ್ದಾರೆ. ಅದರಲ್ಲಿ ಸಿ.ಎಂ. ಇಬ್ರಾಹಿಂ ಕೂಡ ಒಬ್ಬರು ಎಂದು ಆರೋಪಿಸಿದರು.
ಮಸೀದಿಯಲ್ಲಿ ಎಲ್ಲಾ ಪಕ್ಷದವರು ಆಗಮಿಸುತ್ತಾರೆ. ಇಂತಹ ನಿರ್ಧಾರ ಯಾವ ಮಸೀದಿಯಲ್ಲೂ ತೆಗೆದುಕೊಳ್ಳುವುದಿಲ್ಲ. ಮಸೀದಿ ಒಂದು ಪವಿತ್ರ ಸ್ಥಳ. ಅಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲ. ಅದು ಅವರಿಗೆ ತಿಳಿದಿದ್ದರೂ ಮುಸ್ಲಿಂ ಮತದಾರರ ಓಲೈಕೆಗಾಗಿ ಹಾಗೂ ಯಾವ ಮುಸ್ಲಿಮರು ಪ್ರಶ್ನೆ ಮಾಡುವುದಿಲ್ಲವೆಂಬ ಅಭಿಲಾಷೆಯಿಂದ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಅವರು ಹೇಳಿದ ಮಾತು ಸತ್ಯವೇ ಆಗಿದ್ದರೆ ನಮ್ಮ ಪವಿತ್ರ ಗ್ರಂಥ ಕುರಾನ್ ಮುಟ್ಟಿ ಪ್ರಮಾಣ ಮಾಡಲಿ. ಮತದಾನ ಪ್ರತಿ ಪ್ರಜೆಯ ವಯಕ್ತಿಕವಾದ ಹಕ್ಕು. ಅದನ್ನು ಒತ್ತಾಯವಾಗಿ ಪಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಈ ರೀತಿ ಸುಳ್ಳು ಹೇಳಿಕೊಂಡು ಸಮಾಜದಲ್ಲಿ ಒಡಕು ಸೃಷ್ಟಿ ಮಾಡುವುದನ್ನು ನಿಲ್ಲಿಸಬೇಕು. ಅವರ ಸುಳ್ಳಿಗೆ ಮುಸ್ಲಿಂ ಬಾಂದವರು ಮುಂದಿನ ಚುನಾವಣೆಯಲ್ಲಿ ಮತದಾನದ ಮೂಲಕವೇ ತಕ್ಕ ಉತ್ತರ ನೀಡಲಿದ್ದಾರೆಂದು ಹೇಳಿದರು.