ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು. ಪ್ರತಿಯೊಬ್ಬರೂ ಮತದಾನದ ಹಕ್ಕು ಚಲಾಯಿಸಲು ಮತದಾನಕ್ಕೆ ಮೌಲ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಮೂಡಿಗೆರೆ ತಹಸೀಲ್ದಾರ್ ತಿಪ್ಪೇಸ್ವಾಮಿ ಹೇಳಿದರು.
ಅವರು ಬುಧವಾರ ಪಟ್ಟಣದ ತಾಲೂಕು ಕಚೇರಿಯಲ್ಲಿ ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷ ಹಾಗೂ ಸಂಘ ಸಂಸ್ಥೆಗಳ ಮುಖಂಡರಿಗಾಗಿ ಏರ್ಪಡಿಸಿದ್ದ ಇವಿಎಂ ಯಂತ್ರದ ಬಗ್ಗೆ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಂದು ಮತವೂ ಅತ್ಯಮೂಲ್ಯವಾಗಿದೆ. ಈ ಹಿಂದೆ ಬ್ಯಾಲೆಟ್ ಪೇಪರ್ನಲ್ಲಿ ಮತ ಚಲಾಯಿಸುವ ಮೂಲಕ ಚುನಾವಣೆ ನಡೆಸಲಾಗುತ್ತಿತ್ತು. ಅದರಿಂದ ಬಹಳಷ್ಟು ಸಮಸ್ಯೆ ಎದುರಾಗುತ್ತಿತ್ತು. ಆದರೆ ಇವಿಎಂ ಯಂತ್ರದಲ್ಲಿ ಅಂತಹ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಕೆಲವರಲ್ಲಿ ಇಂದಿಗೂ ಇವಿಎಂ ಯಂತ್ರದ ಬಗ್ಗೆಯೂ ಬಹಳಷ್ಟು ಗೊಂದಲವಿದೆ. ಆ ಗೊಂದಲ ನಿವಾರಿಸುವ ಮೂಲಕ ಪ್ರತಿಯೊಬ್ಬರೂ ಮತದಾನದ ಹಕ್ಕು ಚಲಾಯಿಸಲು ಮತದಾರರಲ್ಲಿ ಜಾಗೃತಿ ಮೂಡಿಸಬೇಕೆಂದು ಮನವಿ ಮಾಡಿದರು.
ಮಾಸ್ಟರ್ ಟ್ರೈನರ್ ಶಿವರಾಮೇಗೌಡ ಮಾತನಾಡಿ, ಇವಿಎಂ ಯಂತ್ರ ಒಂದು ಲೆಕ್ಕಯಂತ್ರದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದನ್ನು ಜಗತ್ತಿನಲ್ಲಿ ಹ್ಯಾಕ್ ಮಾಡಲು ಹಾಗೂ ಒಂದೇ ಚಿಹ್ನೆಗೆ ಮತ ಬೀಳುವಂತೆ ಸಾಬೀತು ಮಾಡಲು ಇದೂವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ. ಅನೇಕ ಹಂತದಲ್ಲಿ ಪರೀಕ್ಷೆ ನಡೆಸಿ ಇವಿಎಂ ಯಂತ್ರ ತಯಾರಿಸಲಾಗಿದೆ. ಮುಂಬರುವ ಚುನಾವಣೆಯಲ್ಲಿ ಉಪಯೋಗಿಸುವ ಇವಿಎಂ ಯಂತ್ರದಲ್ಲಿ ಮತ ಚಲಾಯಿಸಿದ ಬಳಿಕ ಸೀರಿಯಲ್ ನಂಬರ್, ಅಭ್ಯರ್ಥಿ ಹೆಸರು, ಚಿಹ್ನೆ ಮತ್ತು ಫೋಟೊ ತೋರಿಸುತ್ತದೆ. ಇವಿಎಂ ಯಂತ್ರದ ಬಗ್ಗೆ ಯಾವ ಸಂದೇಹ ಕೂಡ ಬೇಡ. ಮತದಾರರು ಯವುದೇ ಗೊಂದಲವಿಲ್ಲದೇ ಮತ ಚಲಾಯಿಸಬಹುದೆಂದು ಹೇಳಿದರು. ಜತೆಗೆ ಇನ್ನಿಬ್ಬರು ಮಾಸ್ಟರ್ ಟ್ರೈನರ್ಗಳಾದ ಶ್ರೀನಿವಾಸ್, ತಿಮ್ಮಪ್ಪ ಅವರು ಇವಿಎಂ ಯಂತ್ರದ ಬಗ್ಗೆ ಜಾಗೃತಿ ಮೂಡಿಸಿದರು.
ತಾ.ಪಂ. ಇಒ ಹರ್ಷಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಸಿ.ಸುರೇಂದ್ರ, ಕಾರ್ಯದರ್ಶಿ ಸಂಪತ್ ಬಿಳಗುಳ, ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಎಸ್.ರಘು, ಜೆಡಿಎಸ್ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಮಹಮ್ಮದ್ ನೂರುಲ್ಲಾ ಸೇರಿದಂತೆ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.