ವ್ಯಕ್ತಿಯೊಬ್ಬರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮೃತನ ಪತ್ನಿ ಮತ್ತು ಆಕೆಯ ಪ್ರಿಯಕರನ ವಿರುದ್ಧ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.
ಮೂಡಿಗೆರೆ ತಾಲ್ಲೂಕು ಗೋಣಿಬೀಡು ಠಾಣಾ ವ್ಯಾಪ್ತಿಯ ಉಗ್ಗೇಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಜಗದೀಶ್ ಆಚಾರ್ (34 ವರ್ಷ) ವಿಷಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಈ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಜಗದೀಶ್ ಪೋಷಕರು ಆತನ ಪತ್ನಿ ಮತ್ತು ಪ್ರಿಯಕರನ ಮೇಲೆ ಗೋಣಿಬೀಡು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೋಷಕರು ಗೋಣಿಬೀಡು ಠಾಣೆಗೆ ನೀಡಿರುವ ದೂರಿನಲ್ಲಿ ನನ್ನ ಮಗನಿಗೆ 13 ವರ್ಷದ ಹಿಂದೆ ನೇತ್ರಾಳೊಂದಿಗೆ ವಿವಾಹವಾಗಿ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿದೆ. 6 ವರ್ಷಗಳ ಹಿಂದಿನಿಂದ ನನ್ನ ಸೊಸೆ ನೇತ್ರಾಳಿಗೆ ಪಕ್ಕದ ಅಂಗಡಿ ಗ್ರಾಮದ ಧನಂಜಯ ಎಂಬ ವ್ಯಕ್ತಿಯೊಂದಿಗೆ ಪರಿಚಯವಾಗಿ ಅವರಿಬ್ಬರು ಅನ್ಯೋನ್ಯವಾಗಿದ್ದರು. ಈ ಬಗ್ಗೆ ನನ್ನ ಮಗ ಮತ್ತು ಸೊಸೆಯ ನಡುವೆ ಜಗಳವಾಗುತ್ತಿತ್ತು. ಆದರೂ ನನ್ನ ಸೊಸೆ ಧನಂಜಯನೊಂದಿಗಿನ ಅಕ್ರಮ ಸಂಬಂಧ ಬಿಟ್ಟಿರಲಿಲ್ಲ.
ಇದೀಗ ನನ್ನ ಮಗ ಸಾವನ್ನಪ್ಪಿದ್ದು ತನ್ನ ಪತ್ನಿ ಧನಂಜಯ ಅವನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದರಿಂದ ಅವರಿಬ್ಬರು ಪದೇ ಪದೇ ನನಗೆ ಸಾಯಿ ಸಾಯಿ ಎಂದು ಹೇಳಿತ್ತಿದ್ದುದ್ದರಿಂದ ಮನನೊಂದು ಕಳೇನಾಶಕ ಕುಡಿದಿರುತ್ತೇನೆ ಎಂದು ನನ್ನೊಂದಿಗೆ ಹೇಳಿದ್ದಾನೆ. ಆದ್ದರಿಂದ ನನ್ನ ಮಗನ ಸಾವಿಗೆ ದುಷ್ಪ್ರೇರಣೆ ನೀಡಿರುವ ನೇತ್ರಾ ಮತ್ತು ಧನಂಜಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮೃತ ಜಗದೀಶನ ತಾಯಿ ಯಶೋಧಮ್ಮ ಗೋಣಿಬೀಡು ಠಾಣೆಗೆ ದೂರು ನೀಡಿದ್ದಾರೆ.
ಈ ನಡುವೆ ನಿನ್ನೆ ರಾತ್ರಿಯಿಂದ ಮೃತ ಜಗದೀಶನ ಪತ್ನಿ ನೇತ್ರಾ ಮನೆಯಿಂದ ನಾಪತ್ತೆಯಾಗಿದ್ದಾಳೆ ಎಂದು ತಿಳಿದುಬಂದಿದೆ.
ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.