ಸಹೋದ್ಯೋಗಿ ಪೊಲೀಸ್ ಸಿಬ್ಬಂದಿಗಳ ವಿರುದ್ಧವೇ ಸಂಚು ನಡೆಸಿದ ಆರೋಪದ ಮೇಲೆ ಪೊಲೀಸ್ ಪೇದೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತು ಮಾಡಿರುವ ಘಟನೆ ಮೂಡಿಗೆರೆ ಠಾಣೆಯಲ್ಲಿ ನಡೆದಿದೆ.
ಮೂಡಿಗೆರೆ ಠಾಣೆಯ ಉಮೇಶ್ ಅಮಾನತಾಗಿರುವ ಸಿಬ್ಬಂದಿ.
ತನ್ನ ಸಹೋದ್ಯೋಗಿಗಳ ಮೇಲೆ ಕೇಸು ದಾಖಲಿಸಲು ಮತ್ತು ಹಣಕ್ಕೆ ಬೇಡಿಕೆ ಇಡುವಂತೆ ದೂರುದಾರರಿಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಅಮಾನತು ಮಾಡಲಾಗಿದೆ.
ಈ ಮೂಲಕ ಮೂಡಿಗೆರೆ ಠಾಣೆಯಲ್ಲಿ ಕಳ್ಳತನದ ಆರೋಪದ ಮೇಲೆ ಕರೆತಂತಿದ್ದ ವ್ಯಕ್ತಿಯ ಮೇಲೆ ಪೊಲೀಸ್ ಹಲ್ಲೆ ಪ್ರಕರಣ ತಿರುವು ಪಡೆದುಕೊಂಡಿದೆ.
ಏನಿದು ಪ್ರಕರಣ ? : ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಗ್ರಾಮದಲ್ಲಿ ನಡೆದಿತ್ತು ಎನ್ನಲಾದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳತನವಾದ ಮನೆಯ ಬಾಗಿಲಿನ ಚಿಲಕದ ಮೇಲೆ ಬೆರಳಚ್ಚು ಇತ್ತು ಎಂದು ಮಂಜು ಎಂಬಾತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿತ್ತು.
ವಿಚಾರಣೆಯ ಸಂದರ್ಭದಲ್ಲಿ ಮಂಜು ಮೇಲೆ ಪೊಲೀಸರು ತೀವ್ರ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಂಜು ಪತ್ನಿ ನೀಡಿದ ದೂರಿನ ಮೇರೆಗೆ ಚಿಕ್ಕಮಗಳೂರು ಎಸ್ಪಿಯವರು ಮೂಡಿಗೆರೆ ಠಾಣೆಯ ಪೊಲೀಸ್ ಪೇದೆಗಳಾದ ವಸಂತ ಮತ್ತು ಲೋಹಿತ್ ಇವರುಗಳನ್ನು ಅಮಾನತು ಮಾಡಿದ್ದರು.
ಪೊಲೀಸ್ ಪೇದೆಗಳ ವಿರುದ್ಧ ಎಫ್.ಐ.ಆರ್. ದಾಖಲಿಸಬೇಕು ಎಂದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಮತ್ತೊಂದೆಡೆ ಪೊಲೀಸರ ಮೇಲೆ ಒತ್ತಡ ಹಾಕಿ ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸಲಾಗುತ್ತಿದೆ ಎಂದು ಪೊಲೀಸ್ ಸಿಬ್ಬಂದಿಗಳ ಪರವಾಗಿಯೂ ಕೆಲ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು.
ಇದೀಗ ಈ ಪ್ರಕರಣಕ್ಕೆ ತಿರುವು ಸಿಕ್ಕಿದೆ.
ಕಳ್ಳತನ ಆರೋಪದ ಮೇಲೆ ಪೊಲೀಸರ ವಿಚಾರಣೆಯ ವೇಳೆ ದೈಹಿಕ ಹಲ್ಲೆಗೆ ಒಳಗಾಗಿದ್ದ ಮಂಜು ಕಡೆಯವರನ್ನು ಸಂಪರ್ಕಿಸಿ ಪೊಲೀಸರ ವಿರುದ್ಧ ದೂರು ನೀಡುವಂತೆ ಮತ್ತು ಪೊಲೀಸರಿಂದ 50 ಸಾವಿರ ಹಣಕ್ಕೆ ಬೇಡಿಕೆ ಇಡುವಂತೆ ಪೊಲೀಸ್ ಪೇದೆ ಉಮೇಶ್ ಕುಮ್ಮಕ್ಕು ನೀಡಿದ್ದ ಎಂಬ ಆರೋಪ ಈಗ ಕೇಳಿಬಂದಿದೆ.
ಈ ಬಗ್ಗೆ ವಿಚಾರಣೆ ನಡೆಸಿದ ಮೂಡಿಗೆರೆ ಸರ್ಕಲ್ ಇನ್ಸ್ ಪೆಕ್ಟರ್ ಸೋಮೇಗೌಡ ಅವರು ನೀಡಿದ ವರದಿಯನ್ನು ಆದರಿಸಿ ಪೇದೆ ಉಮೇಶ್ ನನ್ನು ಎಸ್ಪಿ ಉಮಾಪ್ರಶಾಂತ್ ಅಮಾನತು ಮಾಡಿ ಆದೇಶಿಸಿದ್ದಾರೆ.
ಹದಿನೈದು ದಿನಗಳ ಅವಧಿಯಲ್ಲಿ ಮೂಡಿಗೆರೆ ಠಾಣೆಯ ಮೂವರು ಪೊಲೀಸ್ ಪೇದೆಗಳು ಅಮಾನತಾಗಿದ್ದಾರೆ. ಈ ಮೂಲಕ ದಾರದಹಳ್ಳಿ ಕಳ್ಳತನ ಪ್ರಕರಣ ಮತ್ತು ಆ ನಂತರ ನಡೆದ ಘಟನಾವಳಿಗಳು ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ.
ನಿರಂತರ ಸುದ್ದಿಗಳಿಗಾಗಿ ದರ್ಪಣ ನ್ಯೂಸ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ
https://chat.whatsapp.com/DDXjmfQaBa0HJQqmKf7y89